ಬೆಳ್ತಂಗಡಿ: ಚೂಡಿದಾರದ ಶಾಲನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ! ಮನೆಯಲ್ಲಿ ಯಾರೂ ಇಲ್ಲದಾಗ ನಡೆದ ಘಟನೆ-ಠಾಣೆಯಲ್ಲಿ ಪ್ರಕರಣ ದಾಖಲು

Share the Article

ಬೆಳ್ತಂಗಡಿ: ತಾಲೂಕಿನ ಕಸಬಾ ಗ್ರಾಮದ ಚರ್ಚ್ ರೋಡ್ ಎಂಬಲ್ಲಿ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಶಿರ್ಲಾಲು ನಿವಾಸಿ ವಿನೋದ್(44) ಎಂದು ಗುರುತಿಸಲಾಗಿದೆ. ವಿವಾಹಿತರಾಗಿದ್ದ ವಿನೋದ್ ವಿಪರೀತ ಅಮಲು ಪದಾರ್ಥ ಸೇವನೆಯನ್ನು ಮಾಡುತ್ತಿದ್ದು, ತಾನು ಕುಡಿದು ಬಂದಾಗಲೆಲ್ಲ ಪತ್ನಿಯೊಂದಿಗೆ ಜಗಳವಾಡಿ ಸಾಯುತ್ತೇನೆ ಎಂದು ಹೆದರಿಸುತ್ತಿದ್ದರು.

ಆದರೆ ಕೆಲ ದಿನಗಳ ಹಿಂದೆ ಪತ್ನಿಯು ಅಗತ್ಯ ಕೆಲಸಕ್ಕಾಗಿ ತವರು ಮನೆಗೆ ತೆರಳಿದ್ದು ದಿನಾಲು ಗಂಡನಿಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಘಟನೆ ನಡೆದ ದಿನ ಅದೆಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಯಿಂದ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯ ಬಚ್ಚಲು ಕೋಣೆಯ ಮಾಡಿನ ಅಡ್ಡಕ್ಕೆ ಚೂಡಿದಾರದ ಶಾಲನ್ನು ಕಟ್ಟಿ ಅದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಬೆಳಕಿಗೆ ಬರುತ್ತಿದ್ದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply