ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಗೆ ಮರಣದಂಡನೆ!! 38 ಆರೋಪಿಗಳಲ್ಲಿ ಇಬ್ಬರು ಮಂಗಳೂರಿನವರು

ಮಂಗಳೂರು : ಅಹ್ಮದಾಬಾದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾದ ವಿವಿಧ ರಾಜ್ಯಗಳ ಒಟ್ಟು 38 ಮಂದಿಗೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ( ಫೆ. 18) ಮರಣದಂಡನೆ ಶಿಕ್ಷೆ ವಿಧಿಸಿದೆ. ಅದರಲ್ಲಿ ಮಂಗಳೂರಿನ ಸಯ್ಯದ್ ಮೊಹಮ್ಮದ್ ನೌಷಾದ್ ಹಾಗೂ ಅಹ್ಮದ್ ಬಾವ ಹೆಸರು ಕೂಡಾ ಇದೆ‌.

ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 56 ಮಂದಿ ಮೃತಪಟ್ಟಿದ್ದು, ಈ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, 2008 ರ ಜುಲೈ 28 ರಂದು ಈ ಘಟನೆ ನಡೆದಿತ್ತು. ಇಂಡಿಯನ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್ ಗಳಾದ ಯಾಸಿನ್ ಭಟ್ಕಳ್ ನ ನಿಕಟವರ್ತಿಯಾಗಿದ್ದ ನೌಷಾದ್ ಮಂಗಳೂರಿನ ಪಾಂಡೇಶ್ವರದ ಸುಭಾಷ್ ನಗರದಲ್ಲಿ ವಾಸಿಸುತ್ತಿದ್ದು, ಪೊಲೀಸರು ಈತನನ್ನು 2008 ರ ಅಕ್ಟೋಬರ್ 3 ರಂದು ಮುಂಜಾನೆ ಆತನನ್ನು ಬಂಧಿಸಿದ್ದರು. ಇವರ ಜೊತೆಗೆ ಉಳ್ಳಾಲದಿಂದ ಮೊಹಮ್ಮದ್ ಅಲಿ ಹಾಗೂ ಜಾವಿದ್ ಅಲಿ, ಹಳೆಯಂಗಡಿಯ ಅಹ್ಮದ್ ಬಾವಾ ಎಂಬುವವರನ್ನು ಕೂಡಾ ಬಂಧಿಸಲಾಗಿತ್ತು.

ನೌಷಾದ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆತನಿಗೆ ಸರ್ಕಿಟ್ ತಯಾರಿಕೆ ಬಗ್ಗೆ ಗೊತ್ತಿತ್ತು. ಅಮೋನಿಯಂ ನೈಟ್ರೇಟ್ ಬಳಸಿ ಸರ್ಕಿಟ್ ಜೋಡಿಸಿದ್ದನ್ನು ಸೂರತ್ ಗೆ ಕೊಂಡೊಯ್ದು ಅಲ್ಲಿದ್ದ ಇಕ್ಬಾಲ್ ಭಟ್ಕಳ್ ಎಂಬ ಉಗ್ರ ಡೆಟೋನೇಟರ್ ಗಳನ್ನು ಜೋಡಿಸಿ ಅದನ್ನು ಇವರುಗಳು ಎಲ್ಲೆಲ್ಲಿ ಸ್ಫೋಟಕಕ್ಕೆ ಬಳಸಬೇಕು ಎಂಬುದನ್ನು ಪ್ಲ್ಯಾನಿಂಗ್ ಮಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದಿತ್ತು.

ಮಂಗಳೂರಿನ ಕೋರ್ಟ್ ಈಗಾಗಲೇ ನೌಷಾದ್ ಹಾಗೂ ಅಹ್ಮದ್ ಬಾವಾ ಎಂಬುವವರನ್ನು ದೋಷಿ ಎಂದು ಘೋಷಿಸಿತ್ತು. ಈಗ ಅಹ್ಮದಾಬಾದ್ ನ್ಯಾಯಾಲಯವು ಇವರನ್ನು ಸೇರಿಸಿ 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ಸ್ವಾಗತಾರ್ಹ.

2008 ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್ ನ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ಶಿಕ್ಷೆ ನೀಡಿ, 13 ವರ್ಷಗಳ ಹಳೆಯ ಪ್ರಕರಣಕ್ಕೆ ಅಂತ್ಯ ಹಾಡಿದೆ.

ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಬಣದ ನಿಷೇಧಿತ ವಿದ್ಯಾರ್ಥಿಗಳು ಕೂಡಾ ಇದರಲ್ಲಿ ಭಾಗಿಯಾಗಿದ್ದರು. 2002 ರಲ್ಲಿ ಗುಜರಾತಿನ ನಡೆದ ಗೋಧ್ರಾ ಗಲಭೆಗೆ ಸೇಡಾಗಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಈ ಕೃತ್ಯವನ್ನು ಎಸಗಿತ್ತು ಎಂದು ಹೇಳಲಾಗಿದೆ.

Leave A Reply

Your email address will not be published.