ಕರಾವಳಿಯಲ್ಲಿ ಮತ್ತೊಮ್ಮೆ ದೇವರ ಕಾರ್ಣಿಕ ಶಕ್ತಿಯ ಅನಾವರಣ | ಮನೆಯಿಂದ ಕಳ್ಳತನವಾಗಿದ್ದ ದ್ವಿಚಕ್ರ ವಾಹನ ದೇವರಿಗೆ ಹರಕೆ ಸಲ್ಲಿಸಿ ಹೊರಬರುವಷ್ಟರಲ್ಲಿ ಪತ್ತೆ !!

Share the Article

ಕರಾವಳಿಯಲ್ಲಿ ದೈವ, ದೇವರಿಗೆ ಅದರದ್ದೇ ಆದ ಕಾರ್ಣಿಕ ಶಕ್ತಿಯಿದೆ. ಜನರಿಗೆ ಏನಾದರೊಂದು ತೊಂದರೆ ಆದಾಗ ದೈವ ದೇವರಿಗೆ ಹರಕೆ ಕಟ್ಟಿಕೊಂಡರೆ ಸಾಕು, ಕಷ್ಟಗಳು ಕೆಲಕ್ಷಣದಲ್ಲೇ ಪರಿಹಾರವಾಗಿದ್ದುಂಟು. ಈ ಸಾಲಿಗೆ ಸೇರಿದೆ ಉಪ್ಪಿನಂಗಡಿಯ ಈ ಘಟನೆ.

ಉಪ್ಪಿನಂಗಡಿಯ ಉದ್ಯಮಿ ಸುಂದರ ಗೌಡ ಎಂಬವರ ‌ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಹಲವು ದಿನಗಳಾದರೂ ವಾಹನ ಪತ್ತೆಯಾಗಿರಲಿಲ್ಲ. ಆದರೆ ದೇವರ ಮೊರೆಹೋದ ಕ್ಷಣಾರ್ಧದಲ್ಲೇ ವಾಹನ ಸಿಕ್ಕಿದೆ ಎಂದು ಮಾಲೀಕರ ಮೊಬೈಲ್‌ಗೆ ಸಂದೇಶ ಬಂದಿದೆ!!

ಹೌದು, ವಾಹನ ಪತ್ತೆಯಾಗದಿದ್ದಾಗ ದಾರಿ ತೋಚದೆ ಸುಂದರ ಗೌಡ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದೇವಸ್ಥಾನದಿಂದ ಹೊರ ಬರಬೇಕೆನ್ನುವಷ್ಟರಲ್ಲಿ ಕಳವಾದ ವಾಹನ ಕೊಡಗಿನ ಶನಿವಾರಸಂತೆ ಸಮೀಪ ಪತ್ತೆಯಾಗಿರುವ ಬಗ್ಗೆ ಮೊಬೈಲ್ ಸಂದೇಶ ಬಂದಿದೆ.

ಶನಿವಾರಸಂತೆ ಪರಿಸರದಲ್ಲಿ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಕಳ್ಳ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಇದೀಗ ದ್ವಿಚಕ್ರ ವಾಹನವನ್ನು ಉಪ್ಪಿನಂಗಡಿಗೆ ತರಲಾಗಿದೆ. ಇದೆಲ್ಲವೂ ದೇವರ ಪವಾಡ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

Leave A Reply