ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ | ಹಾಡುಹಗಲೇ ಮಚ್ಚು ಬೀಸಿ ಕೊಂದು ಪರಾರಿ

ಬೆಂಗಳೂರು, ಜೂನ್ 24: ಮಹಾನಗರ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆಯೇ ತಲ್ವಾರ್ ಗಳು ಝಲಪಿಸಲಾಗಿದೆ.
ಮಚ್ಚು ಬೀಸಿ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಅವರ ಕಚೇರಿ ಮುಂದೆಯೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ
ಒಳಗಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳದಲ್ಲಿದ್ದವರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ರೇಖಾ ಅವರು ಮೃತಪಟ್ಟ ಬಗ್ಗೆ ಆಸ್ಪತ್ರೆಯ ಡಾ ಸಂಜೀವ್ ಪಾಟೀಲ್ ಖಚಿತಪಡಿಸಿದ್ದಾರೆ.

ಬೆಂಗಳೂರಿನ ಫ್ಲವರ್ ಗಾರ್ಡನ್ ಸಮೀಪ ಈ ಘೋರ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಸುತ್ತಮುತ್ತ ಜನರು ವಾಸಿಸುತ್ತಿರುವ ಪ್ರದೇಶವಾಗಿದೆ. ರೇಖಾ ಕದಿರೇಶ್ ಅವರು ಕೆಲಸ ಮಾಡುತ್ತಿರುವ ಕಚೇರಿಯ ಹೊರಗೆ ಹಾಡಹಗಲೇ ಈ ಘಟನೆ ನಡೆದಿದ್ದು ಆಘಾತ ಮೂಡಿಸಿದೆ. ಚಿಕ್ಕಪೇಟೆ, ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಪತಿ ಕಡಿರೇಶ್ ಕೂಡಾ ಕೊಲೆ !

ಹಳೆ ವೈಷಮ್ಯದಿಂದ ರೇಖಾ ಅವರ ಹತ್ಯೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು ಮೂರು ವರ್ಷಗಳ ಹಿಂದೆ 2018ರ ಫೆಬ್ರವರಿ 7ರಂದು ರೇಖಾ ಅವರ ಪತಿ ಕದಿರೇಶ್ ಅವರನ್ನು ಸಹ ಇದೇ ರೀತಿ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು. ಪತಿಯನ್ನು ಕೊಂದ ಮೂರು ವರ್ಷಗಳ ನಂತರ ಪತ್ನಿಯ ಹತ್ಯೆಯನ್ನು ದುಷ್ಕರ್ಮಿಗಳು ನಡೆಸಿದ್ದಾರೆ.

ಪೀಟರ್, ಸುರೇಶ್, ರಾಬರ್ಟ್ ಎಂಬುವವರೇ ಕೊಲೆಗೈದಿರಬಹುದು ಎಂಬ ಅನುಮಾನ ಗಾಢವಾಗಿದೆ. ಟೆಂಡರ್ ಕರೆದ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Leave A Reply

Your email address will not be published.