ಭಜನಾ ಸತ್ಸಂಗದ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪ್ರಸಾದಕ್ಕೆ ಹರಿಹರಪುರದಿಂದ 25 ಸಾವಿರ ರುದ್ರಾಕ್ಷಿ


ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ,ಭಜನ ಸತ್ಸಂಗ ಸಮಾವೇಶ ಸಮಿತಿ 2020, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಫೆ.8ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ -2020,ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ,ಭಜನಾ ಸಂಕೀರ್ತನಾ ಮೆರವಣಿಗೆಯ ಹಿನ್ನೆಲೆಯಲ್ಲಿ ನಡೆಯಲಿರುವ ಕೋಟಿ ಶಿವ ಪಂಚಾಕ್ಷರಿ ಜಪ ಯಜ್ಞದಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪದಲ್ಲಿನೀಡಲು ಹರಿಹರಪುರದಿಂದ 25ಸಾವಿರ ರುದ್ರಾಕ್ಷಿ ಪ್ರಸಾದ ಪುತ್ತೂರಿಗೆ ಆಗಮಿಸಿದೆ.

ರುದ್ರಾಕ್ಷಿ ಪ್ರಸಾದ ವಿತರಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಶ್ರೀ ಲಕ್ಷ್ಮೀ ನರಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಸುಮಾರು 25ಸಾವಿರ ರುದ್ರಾಕ್ಷಿ ಪ್ರಸಾದವನ್ನು ಪುತ್ತೂರಿಗೆ ಕಳುಹಿಸಿದ್ದಾರೆ. ಕೇಸರಿ ದಾರದಲ್ಲಿ ಸುತ್ತಿದ ರುದ್ರಾಕ್ಷಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ರುದ್ರಾಕ್ಷಿಗೆ ದಾರ ಜೋಡಣೆ ನಿಟ್ಟಿನಲ್ಲಿ ಸುಮಾರು200 ಕ್ಕೂ ಅಧಿಕ ಮಹಿಳೆಯರು ಕೈ ಜೋಡಿಸಿದರು.

ಭಜನಾ ಸತ್ಸಂಗ ಸಮಾವೇಶ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಪುತ್ತೂರು, ವಿಟ್ಲ ಪೇಟೆಯಲ್ಲಿ ಆಮಂತ್ರಣ ವಿತರಣೆ ಕಾರ್ಯ ನಡೆಯಲಿದೆ.

ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ಇದರ ಸದಸ್ಯರು ಹಾಗೂ ಪದಾಧಿಕಾರಿಗಳು, ಭಜನಾ ಸತ್ಸಂಗ ಸಮಾವೇಶ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ಸದಸ್ಯರು ಶ್ರಮಿಸುತ್ತಿದ್ದಾರೆ.