UP: ಪ್ರೇಮ ಪ್ರಕರಣ ಒಂದು ಅಘಾತಕಾರಿ ಘಟನೆಯಾ ಮುಖಾಂತರ ದುರಂತ ಅಂತ್ಯ ಕಂಡಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಗೆಳತಿಯನ್ನು ಭೇಟಿಯಾಗಲು ಬಂದಿದ್ದ ಯುವಕನೊಬ್ಬ ಲೈಂಗಿಕ ಉತ್ತೇಜಕ ಮಾತ್ರೆಗಳ ಅತಿಯಾದ ಸೇವನೆಯಿಂದ ಸಾವನ್ನಪ್ಪಿದ್ದಾನೆ. ಬಳಿಕ ಗೆಳತಿಯು ಯುವಕನ ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾಳೆ.
ಮೃತನನ್ನು ಬಾಗ್ಪತ್ ಜಿಲ್ಲೆಯ ಫತೇಪುರ್ ಪುತಿ ಗ್ರಾಮದ ನಿವಾಸಿ ವಿನೋದ್ ಕುಮಾರ್ (34) ಎಂದು ಗುರುತಿಸಲಾಗಿದೆ. ವಿನೋದ್ ಪಂಜಾಬ್ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ತನ್ನ ಗ್ರಾಮಕ್ಕೆ ಮರಳಿದ್ದನು. ಭಾನುವಾರ ಬೆಳಿಗ್ಗೆ, ತನ್ನ ಮಾಲೀಕರಿಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಮನೆಯಿಂದ ಹೊರಟಿದ್ದ ವಿನೋದ್, ಬುಲಂದ್ಶಹರ್ನಲ್ಲಿದ್ದ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದನು.
ವಿನೋದ್ ಮತ್ತು ಆತನ ಗೆಳತಿ ಮೊದಲು ಹೋಟೆಲ್ವೊಂದಕ್ಕೆ ತೆರಳಿದ್ದರು. ಅಲ್ಲಿ ವಿನೋದ್ ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದನೆಂದು ತಿಳಿದುಬಂದಿದೆ. ನಂತರ ಅವರಿಬ್ಬರೂ ಅಲ್ಲಿಂದ ಮಲ್ಕಾ ಪಾರ್ಕ್ಗೆ ತೆರಳಿದಾಗ ವಿನೋದ್ನ ಆರೋಗ್ಯ ಸ್ಥಿತಿ ದಿಢೀರ್ ಹದಗೆಟ್ಟಿದೆ. ವಿನೋದ್ ಪ್ರಜ್ಞೆ ತಪ್ಪುತ್ತಿದ್ದಂತೆ ಗಾಬರಿಯಾದ ಆತನ ಹುಡುಗಿ, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ಆಸ್ಪತ್ರೆಯ ಸಿಬ್ಬಂದಿ ಮುಂದೆ ತಾನು ವಿನೋದ್ನ ಪತ್ನಿ ಎಂದು ಸುಳ್ಳು ಹೇಳಿದ್ದಾಳೆ. ಇದೇ ವೇಳೆ ವಿನೋದ್ ಸಹೋದರ ಪ್ರದೀಪ್ಗೆ ಫೋನ್ ಮಾಡಿ, “ವಿನೋದ್ಗೆ ಅಪಘಾತವಾಗಿದೆ, ತಕ್ಷಣ ಬುಲಂದ್ಶಹರ್ಗೆ ಬನ್ನಿ” ಎಂದು ತಿಳಿಸಿದ್ದಾಳೆ. ಆದರೆ, ಚಿಕಿತ್ಸೆ ಫಲಿಸದೆ ವಿನೋದ್ ಸಾವನ್ನಪ್ಪುತ್ತಿದ್ದಂತೆ, ಪೊಲೀಸರು ಬರುವ ಮುನ್ನವೇ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ವಿನೋದ್ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

