

Haveri : ಆಸ್ತಿ, ಮನೆ ಅಥವಾ ಬೇರೆ ಯಾವುದಾದರೂ ಬೆಲೆ ಬಾಳುವ ವಸ್ತುಗಳಿಗಾಗಿ ಹೊಡೆದಾಡುವುದನ್ನು ನೋಡಿದ್ದೇವೆ. ಆದರೆ ಹಾವೇರಿ ಜಿಲ್ಲೆಯಲ್ಲಿ ದೇವಸ್ಥಾನದ ಮೇಲಿನ ಹಕ್ಕಿಗಾಗಿ ಎರಡು ಊರುಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ನಡುವೆ ದೇವಸ್ಥಾನದ ಹಕ್ಕು ಮತ್ತು ಆಡಳಿತದ ವಿಚಾರವಾಗಿ ಮೊದಲಿನಿಂದಲೂ ಇದ್ದ ಕಿಡಿ ಈಗ ಜ್ವಾಲೆಯಾಗಿ ಸ್ಫೋಟಗೊಂಡಿದೆ. ಈ ವಿಚಾರವಾಗಿ ಗುರುವಾರ ಭೀಕರ ಸಂಘರ್ಷ ನಡೆದಿದ್ದು, ಕಲ್ಲು ತೂರಾಟದ ಪರಿಣಾಮವಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಮಾರಾಮಾರಿಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಪುಡಿಯಾಗಿ ಹೋಗಿವೆ.
ಇತ್ತೀಚೆಗೆ ಹಿರೇ ಯಡಚಿ ಗ್ರಾಮಸ್ಥರು ಗುಡ್ಡದಲ್ಲಿರೋ ಹಳೆ ದೇವಸ್ಥಾನದ ಬಳಿಯೇ ಹೊಸದಾಗಿ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದರು. ಅಲ್ಲದೆ, ಬರುವ ಮಾರ್ಚ್ 9 ರಿಂದ ಅದ್ಧೂರಿಯಾಗಿ ದುರಗಮ್ಮನ ಜಾತ್ರೆ ನಡೆಸಲು ನಿರ್ಧರಿಸಿದ್ದರು. ಈ ಜಾತ್ರೆಗಾಗಿ ಗುಡ್ಡದ ಮೇಲೆ ಮಂಟಪ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಹಿರೇ ಯಡಚಿ ಗ್ರಾಮಸ್ಥರು ಮಂಟಪ ನಿರ್ಮಿಸುತ್ತಿರುವುದನ್ನು ಕಂಡು ಕೆಂಡಾಮಂಡಲವಾದ ಕ್ಯಾತನಕೇರಿ ಗ್ರಾಮಸ್ಥರು ಅಲ್ಲಿಗೆ ಬಂದು ತಕರಾರು ತೆಗೆದಿದ್ದಾರೆ. ‘ನಮ್ಮ ಅನುಮತಿ ಪಡೆಯದೇ ದೇವಸ್ಥಾನ ಹೇಗೆ ಕಟ್ಟುತ್ತೀರಿ? ಇಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ನಮ್ಮ ಪರ್ಮಿಷನ್ ಬೇಕು’ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ವಾಗ್ವಾದ ಮುದ್ರೆ ಪಡೆದಿದೆ. ಕ್ಷಣಾರ್ಧದಲ್ಲಿ ಜಗಳ ವಿಕೋಪಕ್ಕೆ ತಿರುಗಿ, ಕ್ಯಾತನಕೇರಿ ಗ್ರಾಮಸ್ಥರು ಹಿರೇ ಯಡಚಿ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಗುಡ್ಡದ ಪ್ರದೇಶ ಹಾಗೂ ಎರಡೂ ಗ್ರಾಮಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ದೇವಸ್ಥಾನದ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
