Home News Tumakuru : ಜಮೀನಿಗೆ ರಸ್ತೆ ಮಾಡಲು ಲಂಚ ಕೇಳಿದ ಅಧಿಕಾರಿ – ದುಡ್ಡಿನ ಬದಲು ಮೂಲಂಗಿ...

Tumakuru : ಜಮೀನಿಗೆ ರಸ್ತೆ ಮಾಡಲು ಲಂಚ ಕೇಳಿದ ಅಧಿಕಾರಿ – ದುಡ್ಡಿನ ಬದಲು ಮೂಲಂಗಿ ತಂದ ರೈತ!!

Hindu neighbor gifts plot of land

Hindu neighbour gifts land to Muslim journalist

 

Tumakuru : ತನ್ನ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕೂಡ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಆಕ್ರೋಶಗೊಂಡ ರೈತರೊಬ್ಬರು ತನ್ನ ಹೊಲದಲ್ಲಿ ತಾನೇ ಬೆಳೆದ ಮೂಲಂಗಿಯನ್ನು ಲಂಚವಾಗಿ ಕೊಡಲು ಕಚೇರಿಗೆ ಬಂದ ಘಟನೆ ತುಮಕೂರಿನಲ್ಲಿ ನಡೆದಿದೆ.

ಹೌದು, ತುಮಕೂರು ಜಿಲ್ಲೆಯ ಮಧುಗಿರಿಯ ತಾಲೂಕು ಕಚೇರಿ ಎದುರು ಪ್ರಸನ್ನ ಕುಮಾರ್ ಎಂಬ ರೈತರೊಬ್ಬರು “ನನ್ನ ಜಮೀನಿಗೆ ರಸ್ತೆ ಮಾಡಿಕೊಡಬೇಕು ಎಂದು ಲೋಕಾಯುಕ್ತರೇ ಸೂಚನೆ ನೀಡಿದ್ದಾರೆ. ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ನನ್ನ ಬಳಿ ಹಣ ಇಲ್ಲ, ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ” ಎಂದು ಘೋಷಣೆ ಕೂಗಿದ್ದಾರೆ.

ಪ್ರಸನ್ನಕುಮಾರ್ ತನಗಿರುವ ಜಮೀನಿನಲ್ಲೇ ತರಕಾರ, ಇತರೆ ವ್ಯವಸಾಯೋತ್ಪನ್ನ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ. ಇತ್ತ ದಾರಿ ಒತ್ತುವರಿ ಬಿಡಿಸಿಕೊಡದೆ ಅತ್ತ ಹೊಸ ದಾರಿ ಮಾಡಿಕೊಡದೆ ಅವರ ಮನವಿಗೆ ಕಿವಿಗೊಡದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ರೈತನ ಜಮೀನಿಗೆ ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಲೋಕಾಯುಕ್ತ ಸೂಚಿಸಿತ್ತು.

ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾ‌ರ್ ಬಳಿ ಮನವಿ ಮಾಡಿದ್ದರು. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ರಸ್ತೆ ನಿರ್ಮಾಣಕ್ಕೆ ಕಂದಾಯಾಧಿಕಾರಿ ಹಾಗೂ ಶಿವನಗೆರೆ ಗ್ರಾಮಲೆಕ್ಕಿಗರು ಬಂದಿಲ್ಲ.

ಸ್ಥಳೀಯ ಅಧಿಕಾರಿಗಳು ದಿನ ಒಂದೊಂದು ಕಥೆ ಹೇಳಿ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಅಧಿಕಾರಿಗಳಿಗೆ ದುಡ್ಡು ಕೊಡಲು ನನ್ನ ಬಳಿ ಹಣ ಇಲ್ಲ. ನಾನು ತರಕಾರಿ ಮಾರಿ ಬದುಕುತ್ತಿದ್ದೇನೆ. ಆದ್ದರಿಂದ ಅಧಿಕಾರಿಗಳಿಗೆ ನಾನು ಬೆಳೆದ ಮೂಲಂಗಿ ಕೊಡಲು ಆಗಮಿಸಿದ್ದೇನೆ ಎಂದು ರೈತ ಪ್ರಸನ್ನಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಇನ್ನು ತನ್ನ ಸಮಸ್ಯೆಗೆ ಇನ್ನಾದರೂ ಸ್ಪಂದಿಸಿ ಅಂತ ನೊಂದ ರೈತ ಮೈಕ್​ನಲ್ಲೇ ಅಧಿಕಾರಿಗಳಿಗೆ ತನ್ನ ಧ್ವನಿ ತಲುಪುವಂತೆ ಘೋಷಣೆ ಕೂಗಿದರು.

 

ಅಲ್ಲದೆ ಲಂಚಕೊಡಲು ಹಣವಿಲ್ಲದೆ ನಾನು ಬೆಳೆದ ಮೂಲಂಗಿ ನೀಡಲು ಬಂದಿದ್ದೇನೆ. ಅದು ಸಾಲದಿದ್ದರೆ ನನ್ನ ಮನೆ ಬರೆದು ಕೊಡುವೆ. ಇಲ್ಲವಾದರೆ ನನಗೆ ತಹಶೀಲ್ದಾರ್ ಕೆಲಸ ಕೊಡಿ. ನನ್ನ ಅಸ್ತಿಯನ್ನೇ ಬರೆದು ಕೊಡುವೆ. ಈ ಬಗ್ಗೆ ಸಿ.ಎಂ ಬಳಿಗೂ ಹೋಗಿದ್ದೇನೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನಿಗೆ ದಾರಿ ಬಿಡಿಸಿಕೊಡುವಂತೆ ಆದೇಶ ತಂದಿದ್ದೆ. ನಕಾಶೆಯಲ್ಲೂ ರಸ್ತೆಯಿದ್ದು ನನಗೆ ರಸ್ತೆ ಮಾಡಿಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನನ್ನ ಸಮಸ್ಯೆಗೆ ಪರಿಹಾರ ನೀಡದಿದ್ದರೆ ವಾರದಲ್ಲಿ ಇದೇ ಕಚೇರಿಯಲ್ಲಿ ನೇಣು ಹಾಕಿಕೊಳ್ಳುತ್ತೇನೆ ಎಂದು ರೈತ ಎಚ್ಚರಿಸಿದ್ದಾರೆ.