

ಪುತ್ತೂರು: ಹೈಕೋರ್ಟ್ ನಿರ್ದೇಶನದ ಮೇರೆಗೆ ನಗರದ ಕೋವಿ (ಬಂದೂಕು) ಠೇವಣಾತಿ ಕೇಂದ್ರದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ (ಎಸಿ) ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, 1500 ಕ್ಕೂ ಅಧಿಕ ಕೋವಿಗಳು ಪತ್ತೆಯಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 83ರ ಅಡಿ ತನಿಖೆ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ನಗರ ಪೊಲೀಸ್ ಠಾಣೆ ಸಮೀಪದ ದೇವಕಿಕೃಪಾ ಕಟ್ಟಡದ ಮೇಲಂತಸ್ತಿನ ಎರಡು ಕೊಠಡಿಗಳು ಹಾಗೂ ಪಕ್ಕದ ಎಸ್ಬಿಬಿ ಟವರ್ನ ಕೊಠಡಿಯೊಂದರಲ್ಲಿ ಈ ಕೋವಿಗಳನ್ನು ಇಡಲಾಗಿತ್ತು. ನಿನ್ನೆ (ಶುಕ್ರವಾರ) ಮಧ್ಯಾಹ್ನ ಹಾಗೂ ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಮಾಡಿದ ಎಸಿ ಕೋವಿ ಠೇವಣಿ ಇದ್ದ ಕೊಠಡಿಗಳನ್ನು ಸೀಲ್ ಮಾಡಿದ್ದಾರೆ.
ನಂತರ ಮಾಧ್ಯಮಗಳ ಮುಂದೆ, ಪರಿಶೀಲನೆ ವೇಳೆ ಕೇಂದ್ರದಲ್ಲಿ 1500 ಕೋವಿಗಳಿರುವುದು ಕಂಡು ಬಂದಿದೆ. ಕೋವಿಗಳ ಜೊತೆಗೆ ಇರುವ ಮದ್ದುಗುಂಡುಗಳ ನಿಖರ ಪ್ರಮಾಣದ ಕುರಿತು ಎರಡು ದಿನದೊಳಗೆ ತನಿಖೆ ಮಾಡಿ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಈ ಕೇಂದ್ರದ ಪರವಾನಗಿ ಗೋಪಾಲಕೃಷ್ಣ ಭಟ್ ಹಾಗೂ ವಿವೇಕಾನಂದ ಭಟ್ ಎಂಬುವವರ ಹೆಸರಿನಲ್ಲಿರುವುದಾಗಿ ಪ್ರಾಥಮಿಕ ಮಾಹಿತಿಯಿದ್ದು, ಪರಿಶೀಲನೆ ನಡೆಲಿದೆʼ ಎಂದು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್, ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕಂದಾಯ ಅಧಿಕಾರಿ ದಯಾನಂದ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಈ ಠೇವಣಾತಿ ಕೇಂದ್ರದಲ್ಲಿ ಸುಮಾರು 40 ವರ್ಷಗಳ ಹಿಂದಿನ ಬಂದೂಕುಗಳು ಇರುವುದು ತನಿಖೆಯಿಂದ ತಿಳಿದು ಬಂದಿದೆ. ಅಗತ್ಯ ದಾಖಲೆಗಳು ಠೇವಣಾತಿ ಕೊಠಡಿಗೆ, ಕಟ್ಟಡಕ್ಕೆ ಸಂಬಂಧಿಸಿರುವುದು ಲಭ್ಯವಿಲ್ಲ. ನಮೂದಿಸಿರುವ ಕೊಠಡಿಗಿಂತ ಹೆಚ್ಚಿನ ಕೊಠಡಿಗಳಲ್ಲಿ ಬಂದೂಕುಗಳನ್ನು ದಾಸ್ತಾನು ಮಾಡಿರುವುದು ಕಾರ್ಯಾಚರಣೆ ವೇಳೆ ಪತ್ತೆಯಾಗಿರುವುದಾಗಿ ವರದಿಯಾಗಿದೆ.
