

Hassan: ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರಕ್ಕೆ ಗ್ರಾಮಸ್ಥರಿಂದ ಉಂಟಾದ ತಕರಾರಿಗೆ ಬೇಸತ್ತು ಅರ್ಚಕ ದೇವಸ್ಥಾನದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ರಂಗಸ್ವಾಮಿ (65) ಆತ್ಮಹತ್ಯೆ ಮಾಡಿಕೊಂಡ ಅರ್ಚಕ. ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ಸರಿಯಾಗಿ ಪೂಜೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ತಹಸೀಲ್ದಾರ್ಗೆ ದೂರು ನೀಡಿದ್ದರು. ಬೇರೆ ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿದ್ದರು. ಇದೇ ವಿಚಾರಕ್ಕೆ ಅರ್ಚಕ ರಂಗಸ್ವಾಮಿ ಹಾಗೂ ಗ್ರಾಮಸ್ಥರ ನಡುವೆ ವಿವಾದ ಏರ್ಪಟ್ಟಿತ್ತು. ಇದೆಲ್ಲದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಬೇಸತ್ತು ದೇವಾಲಯದಲ್ಲೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.













