ಮಂಗಳೂರು: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಕೊನೆಗೂ ಗುರುತಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಿದೆ. ಜೊತೆಗೆ ಇತ್ತೀಚೆಗಷ್ಟೇ ನಿಧನರಾದ ಯಕ್ಷಗಾನದ ದೈತ್ಯ ಪ್ರತಿಭೆ ಸೂರಿಕುಮೇರು ಗೋವಿಂದ ಭಟ್ ಅವರಿಗೆ ಮರಣೋತ್ತರ ಗೌರವ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದ ಕುರಿತು ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮಾ. 28ರಂದು ಪೂರ್ವಾಹ್ನ 11 ಗಂಟೆಗೆ ವಿವಿ ಆವರಣದ ಮಂಗಳ ಸಭಾಂಗಣದಲ್ಲಿ ಈ ಸಂಭ್ರಮ ನಡೆಯಲಿದೆ.

ಯಕ್ಷಗಾನ ರಂಗದ ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅವರ ಅಗಲಿಕೆಯ ನೋವಿನ ನಡುವೆಯೇ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಿಸಿರುವುದು ಕಲಾ ಲೋಕಕ್ಕೆ ಸಂದ ಗೌರವವಾಗಿದೆ. ಇದರೊಂದಿಗೆ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಅಪರೂಪದ ಸಾಧಕ ಹರೇಕಳ ಹಾಜಬ್ಬ ಹಾಗೂ ಜಾನಪದ ಕ್ಷೇತ್ರ ಮತ್ತು ದೈವಾರಾಧನೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರವೀಶ್ ಪಡುಮಲೆ ಅವರಿಗೆ ಗೌರವದ ಗರಿ ಒಲಿದಿದೆ.
