

ಕಾರವಾರ: ಕೋಡಿಬಾಗದ ಸಂತೋಷಿಮಾತಾ ದೇವಸ್ಥಾನದ ಪಕ್ಕದ ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳ ನಡುವೆ ಸಿಲುಕಿದ್ದ ಸುಮಾರು 130 ಕೆಜಿ ತೂಕದ ಹಸಿರು ಕಡಲಾಮೆಯನ್ನು (ಗ್ರೀನ್ ಸೀ ಟರ್ಟಲ್) ಗುರುವಾರ ರಕ್ಷಣೆ ಮಾಡಲಾಯಿತು.
ಮೀನುಗಾರರು ಕಡಲಾಮೆಯನ್ನು ಗುರುತಿಸಿ, ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೇಂದ್ರದ ತಜ್ಞರ ಜೊತೆ ಅರಣ್ಯ ಇಲಾಖೆಯ ಕೋಸ್ಟಲ್ ಮೆರೈನ್ ವಿಭಾಗದ ಸಿಬ್ಬಂದಿ ಸೇರಿ ಕಡಲಾಮೆಯನ್ನು ರಕ್ಷಣೆ ಮಾಡಿದರು.
ʼಹಸಿರು ಕಡಲಾಮೆ ಪಶ್ಚಿಮ ಕರಾವಳಿಯ ಅಳಿವೆ ಪ್ರದೇಶದಲ್ಲಿ ಕಾಣಸಿಗುವುದು ವಿರಳ. ಸಮುದ್ರದ ಉಬ್ಬರ ಇದ್ದಾಗ ಅಳಿವೆ ಬಂದ ಆಮೆ ಇಳಿತದ ನಂತರ ಸಮುದ್ರಕ್ಕೆ ಸಾಗಲಾಗದೆ ಕಾಂಡ್ಲಾ ಸಸಿಗಳ ನಡುವೆ ಸಿಲುಕಿರುವ ಸಾಧ್ಯತೆ ಇದೆʼ ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ಹೇಳಿದ್ದಾರೆ.
ʼಅರಣ್ಯ ಇಲಾಖೆ ಸುಪರ್ದಿಯಲ್ಲಿ ಕಡಲಾಮೆಯನ್ನು ಇರಿಸಿದ್ದೇವೆ. ಕಡಲಾಮೆ ಕುರಿತು ನೈಪುಣ್ಯತೆಯುಳ್ಳ ತಜ್ಞರು ಕುಂದಾಪುರದಿಂದ ಚಿಕಿತ್ಸೆ ನೀಡಲು ಬರುತ್ತಾರೆ. ಚಿಕಿತ್ಸೆ ನೀಡಿದ ನಂತರ ಅದನ್ನು ಸಮುದ್ರದಕ್ಕೆ ಬಿಡಲಾಗುವುದುʼ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ಹೇಳಿದರು.
