ಸಾಗರ: ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರಿಗೆ ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ದಂಡ ವಿಧಿಸಿರುವ ಘಟನೆ ನಡೆದಿದೆ. ಇದನ್ನು ಸ್ವತಃ ಅವರೇ ಬಹಿರಂಗಗೊಳಿಸಿದ್ದಾರೆ.


ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇ 1 ರಂದು ಸಾಗರ ಹೋಟೆಲ್ ವೃತ್ತದ ಬಳಿ ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ರೂ.500 ದಂಡ ಪಾವತಿ ಮಾಡಿ ಎಂದು ವಾಟ್ಸಪ್ಗೆ ನೋಟಿಸ್ ಕಳುಹಿಸಿದ್ದಾರೆ.
ಬಿಎಸ್ವೈ ಅಭಿಮಾನೋತ್ಸವ ಎನ್ನುವ ಕಾರಣಕ್ಕೆ ಶುಕ್ರವಾರ ಕಾರುಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಪೊಲೀಸರ ಅನುಮತಿಯನ್ನೂ ಪಡೆಯಲಾಗಿತ್ತು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾಂಗ್ರೆಸ್ ಪ್ರಮುಖರೊಬ್ಬರ ಕಾರು ಹಾದು ಹೋಯಿತಲ್ಲದೆ, ಅದರಲ್ಲಿದ್ದವರು ಪೊಲೀಸರ ಜೊತೆ ಮಾತನಾಡಿದರು. ನಂತರ ಈ ನೋಟಿಸ್ ಬಂದಿದೆ, ಇದು ರಾಜಕೀಯ ಪ್ರೇರಿತ ಎಂದು ದೂರಿದರು.
