

ಧರ್ಮಸ್ಥಳ: ಮುಂಬರುವ ಚಂದ್ರಗ್ರಹಣದ ಕಾರಣ ಮಾರ್ಚ್ 3,2026 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟ ಮಾಡಿದೆ.
ಮಾರ್ಚ್ 3, ಮಂಗಳವಾರ ಚಂದ್ರಗ್ರಹಣ ಇರುವುದರಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಸಮಯ ನಿಗದಿ ಮಾಡಲಾಗಿದೆ.
ಮಧ್ಯಾಹ್ನ 1.30 ರವರೆಗೆ ಮಾತ್ರ ದೇವರ ದರ್ಶಕ್ಕೆ ಭಕ್ತರ ಅವಕಾಶವಿರುತ್ತದೆ. ಮಧ್ಯಾಹ್ನ 1.30 ರ ನಂತರ ಗ್ರಹಣದ ಪ್ರಯುಕ್ತ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುತ್ತದೆ.
ರಾತ್ರಿ 7.30 ರ ನಂತರ ಗ್ರಹಣ ಮುಕ್ತಾಯದ ಬಳಿಕ ದೇವಸ್ಥಾನದ ಶುದ್ಧೀಕರಣ ಹಾಗೂ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ದರ್ಶನ ಪುನರಾರಂಭಗೊಳ್ಳಲಿದೆ.
ದೇವಸ್ಥಾನದ ಪ್ರಕಟಣೆಯ ಅನುಸಾರ ಗ್ರಹಣದ ಕಾಲಾವಧಿಯು ಮಧ್ಯಾಹ್ನ 3.19 ಗಂಟೆಗೆ ಪ್ರಾರಂಭವಾಗಲಿದ್ದು, ಗ್ರಹಣ ಅಂತ್ಯದ ಅವಧಿ ಸಂಜೆ 6.48 ಗಂಟೆಗೆ.
ದೂರದ ಊರುಗಳಿಂದ ಬರುವ ಭಕ್ತಾದಿಗಳು ಸಮಯದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕ್ಕೆ ಭೇಟಿ ನೀಡುವಂತೆ ಹಾಗೂ ಆಡಳಿತ ಮಂಡಳಿ ಜೊತೆ ಸಹಕರಿಸುವಂತೆ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
