

ಒಡಿಶಾದ ಪುರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಸಾವಿಗೆ ಹೇನು ಕಾರಣವಾಗಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಬಲಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂಪಗಡ ಸಾಹಿ ಗ್ರಾಮದಲ್ಲಿ.
ಆರನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪ್ರಿಯಾ ಸಾಹು ಹೇನು ಸಮಸ್ಯೆಯಿಂದ ಬಳಲುತ್ತಿದ್ದು, ಅದರಿಂದ ಉಂಟಾದ ಸೋಂಕಿನಿಂದ ಸಾವಿಗೀಡಾಗಿದ್ದಾಳೆ.
ಮೊದಲಿಗೆ ಲಕ್ಷ್ಮೀ ಪ್ರಿಯಾ ಕುಟುಂಬವು ಹೇನಿನ ಸಮಸ್ಯೆ ಸಾಮಾನ್ಯ ಸಮಸ್ಯೆ ಎಂದು ತಳ್ಳಿ ಹಾಕಿದೆ. ಲಕ್ಷ್ಮಿಯ ತಾಯಿ ಹೇನುಗಳನ್ನು ನಿವಾರಿಸಲು ಹಲವು ಬಾರಿ ತಲೆ ಬೋಳಿಸಲು ಸಲಹೆ ನೀಡಿದ್ದರೂ, ಬಾಲಕಿ ನಿರಾಕರಿಸಿದ್ದಾಳೆ. ನಂತರ ತಲೆಯಲ್ಲಿನ ಕೀಟದಿಂದ ವಾಸನೆ ಬರಲು ಶುರುವಾಯಿತು. ಇದರಿಂದ ಮುಜುಗರ ಮತ್ತು ಅಸ್ವಸ್ಥತೆ ಉಂಟಾಗಿ ಆಕೆ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಸಿದ್ದಾಳೆ.
ಮೂರು ದಿನದ ಹಿಂದೆ ಲಕ್ಷ್ಮೀಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಆಕೆ ವಾಂತಿ ಮಾಡಲು ಪ್ರಾರಂಭಿಸಿದ್ದು ನಂತರ ರಕ್ತ ವಾಂತಿ ಆಗಿದೆ. ಇದರಿಂದ ಆಕೆಯ ಕುಟುಂಬ ಗಾಬರಿಗೊಂಡು ಕೂಡಲೇ ಆಕೆಯನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು, ಅಷ್ಟರಲ್ಲೇ ಸೋಂಕು ವ್ಯಾಪಕವಾಗಿ ಹರಡಿತ್ತು. ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಲಕ್ಷ್ಮಿ ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾದಳು.
ಹೇನುಗಳು ನೇರವಾಗಿ ಸಾವಿಗೆ ಕಾರಣವಾಗುವುದಿಲ್ಲ ಎಂದು ತಜ್ಞರು ಮತ್ತು ವರದಿಗಳು ಸೂಚಿಸುತ್ತವೆ. ಆದರೆ ದೀರ್ಘಕಾಲದ ಚಿಕಿತ್ಸೆ ಪಡೆಯದೆ ಮತ್ತು ಸಂಪೂರ್ಣ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಹೇನಿನ ಕಾರಣದಿಂದ ಆರೋಗ್ಯಕ್ಕೆ ತೊಡಕಾಗಿರುವ ವರದಿಗಳೂ ಇವೆ.
ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಇದಕ್ಕೆ ಸಾಮಾನ್ಯ ಕಾರಣವೆಂದರೆ ತೀವ್ರವಾದ ಕಬ್ಬಿಣದ ಕೊರತೆ. ಅಂದರೆ ರಕ್ತಹೀನತೆ. ತಲೆ ಹೇನುಗಳು ಬಹಳ ಸಂಖ್ಯೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿದ್ದಾಗ, ಪ್ರತಿದಿನ ಸಣ್ಣ ಪ್ರಮಾಣದಲ್ಲಿ ರಕ್ತ ಬಿಡುಗಡೆಯಾಗುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಅದು ತೀವ್ರ ರಕ್ತದ ನಷ್ಟಕ್ಕೆ ಕಾರಣವಾಗಬಹುದು. ಇದು ಜೀವಕ್ಕೆ ಅಪಾಯವನ್ನುಂಟುಮಾಡಬಹುದು.













