Uppinangady : ಕಳೆದ ಮಾ. 11ರಂದು ತನ್ನ ತೋಟಕ್ಕೆ ಬಂದಿದ್ದ ಜಾನುವಾರುಗಳನ್ನು ಓಡಿಸಲು ಹೋದ ಮಹಿಳೆಯೊಬ್ಬರು ಬಿದ್ದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿತ್ತು. ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಸುಮಾರು 63 ದನಕರಗಳೊಂದಿಗೆ ನಾಲ್ವರು ಅವಿವಾಹಿತ ಸಹೋದರಿಯರು ಜೀವನ ನಡೆಸುತ್ತಿರುವ ಬಲು ಅಪರೂಪದ ಸನ್ನಿವೇಶ ಒಂದು ಬೆಳಕಿಗೆ ಬಂದಿದೆ. ಈ ಕುರಿತು ಸುವರ್ಣ ನ್ಯೂಸ್ ವರದಿ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಗ್ರಾಮದ ತಿರ್ಲೆ ಎಂಬಲ್ಲಿನ ನಾಲ್ವರು ಸಹೋದರಿಯರ ಗೋಪ್ರೇಮ ಇದೀಗ ಬಾರಿ ಸುದ್ದಿಯಾಗುತ್ತಿದೆ. ಮಲೆನಾಡ ಗಿಡ್ಡ ತಳಿಯ ಬರೋಬ್ಬರಿ 63 ದನ ಕರುಗಳೊಂದಿಗೆ ಇವರು ಜೀವನ ಸಾಗಿಸುತ್ತಿದ್ದಾರೆ. ಈ ನಾಲ್ವರು ಸಹೋದರಿಯರ ಜೀವನ ನಾಗರಿಕ ಸಮಾಜದ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವಂತಿದೆ. ನಮಗೆ ಇಬ್ಬರು ಸಹೋದರರಿದ್ದರು, ಅನಾರೋಗ್ಯದಿಂದ ಅವರು ತೀರಿದರು. ಮುಂದೆ ನಮ್ಮ ಹೆತ್ತವರು ತೀರಿದ ಬಳಿಕ ನಮಗೆ ಮುಂದೆ ನಿಲ್ಲುವವರು ಯಾರೂ ಇಲ್ಲದೆ ನಮ್ಮ ಬದುಕು ಹೀಗಾಯಿತು ಎಂದು ಅವರು ಹೇಳುತ್ತಾರೆ.
ನಾಗಮ್ಮ ಗೌಡ, ಚೆನ್ನಮ್ಮ ಗೌಡ, ರೇವತಿ ಗೌಡ, ಲಲಿತಾ ಗೌಡ ಎಂಬ ನಾಲ್ವರು ಸಹೋದರಿಯರು ಸುಮಾರು 5 ಎಕರೆ ಕೃಷಿ ಭೂಮಿ ಮತ್ತು ಅದರಲ್ಲಿನ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಬರಿ ವಾಸವಿರುವುದು ಮಾತ್ರವಲ್ಲ ಸುಮಾರು 63 ಮಲೆನಾಡು ಗಿಡ್ಡ ತಳಿಯ ದನಗಳನ್ನು ಸಾಕಿ, ಸಲಹುತಿದ್ದಾರೆ.
ದನ ಕರುಗಳಿಗೆ ಸಂಪೂರ್ಣ ಸ್ವಾತಂತ್ರ:
ಕಾಡಿನ ಪ್ರಾಣಿಗಳು ಕಾಡೊಳಗೆ ಹೇಗೆ ಜೀವನ ನಡೆಸುತ್ತಿವೆಯೋ ಹಾಗೆಯೇ ಇವರ ದನ ಕರುಗಳಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ಇವರ ಗದ್ದೆ, ತೋಟ, ರಬ್ಬರ್ ತೋಟದ ವಿಶಾಲ ಪರಿಸರದಲ್ಲಿ ಮನಸೋ ಇಚ್ಚೆ ಅಲೆದಾಡುವ ದನ ಕರುಗಳು ಮನಸ್ಸಾದರೆ ಮನೆಯೊಳಗೆ ಬಂದು ಮಲಗುತ್ತವೆ. ಮನೆಯೊಳಗಡೆ ನೆಲಗಳೆಲ್ಲವೂ ತಗ್ಗು -ಗುಂಡಿಗಳಾಗಿದ್ದು, ಅಲ್ಲಿಯೂ ದನ ಕರುಗಳು ಬಂದು ಮಲಗುತ್ತವೆ. ಇವರ ಮನೆಯ ಬೆಡ್ರೂಮ್ ಗೂ ಜಾನುವಾರುಗಳಿಗೆ ಇದೆ ಎಂಟ್ರಿ.
ಮಳೆಗಾಲದಲ್ಲಿ ಹಸುಗಳಿಗೆ ನಾವೇ ಮೇವನ್ನು ತಂದು ಹಾಕುತ್ತೇವೆ ಆದರೆ ಬೇಸಿಗೆಯಲ್ಲಿ ಮೇವಿಗೆ ಬರವಿದೆ. ಹೀಗಾಗಿ ನೀರನ್ನು ಅಷ್ಟೇ ಕೊಡುತ್ತೇವೆ. ಕಾಡಿನಲ್ಲಿ ಮೆಯ್ದು ಬರುತ್ತವೆ. ನಾವು ದನಗಳಿಗೆ ಯಾವುದೇ ಮೇವನ್ನು ಹಾಕದ ಕಾರಣ ಹಾಲನ್ನು ಕೂಡ ಈಗ ಕರೆಯುವುದಿಲ್ಲ ಎಂದು ಹೇಳುತ್ತಾರೆ.
ಈ ಮನೆಯ ಸಹೋದರಿಯರು ದನ ಕರುಗಳೊಂದಿಗೆ ಬದುಕು ಬೆಸೆದುಕೊಂಡಿದ್ದಾರೆ. ಮುಕ್ತವಾಗಿ ಬದುಕುತ್ತಿರುವ ದನ ಕರುಗಳನ್ನು ಕಟ್ಟಿಹಾಕಿ ಸಾಕುವುದು ತ್ರಾಸದಾಯಕ. ಇರುವ ಭೂಮಿಯಲ್ಲೇ ಸ್ಥಳಿಯಾಡಳಿತ ಮುತುವರ್ಜಿ ವಹಿಸಿ ದನ ಕರುಗಳು ಮುಕ್ತವಾಗಿ ಬದುಕುವಂತೆ ಹಾಗೂ ಹೊರಗಡೆ ಹೋಗದಂತೆ ಯೋಜನೆ ರೂಪಿಸಿದರೆ ಪ್ರಯೋಜನಕಾರಿಯಾಗಬಹುದು ಎಂದು ಸಹೋದರಿಯರ ಜೊತೆ ಮಾತುಕತೆಯಾಡಿದ ವಿಶ್ವ ಹಿಂದೂ ಪರಿಷತ್ ಮುಂದಾಳು ನವೀನ್ ನೆರಿಯಾ ಅವರು ಹೇಳಿದ್ದಾರೆ.

