

ಬೆಂಗಳೂರು, 2 ಫೆಬ್ರವರಿ 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಿಸ್ಪರ್ಸ್ ಆಫ್ ದಿ ಮೌಂಟೇನ್’ (Whispers of the Mountain) ಚಿತ್ರ ಪ್ರದರ್ಶನಗೊಂಡಿದ್ದು, ತಮ್ಮ ಚಿತ್ರವನ್ನು ರೂಪಿಸಿದ ಪರಿಸರ ಕಾಳಜಿ, ನೈಜ ಭೂದೃಶ್ಯಗಳು ಹಾಗೂ ನೈಜ ಜೀವನದೊಂದಿಗೆ ಕೆಲಸ ಮಾಡುವಾಗ ಒಬ್ಬ ಚಲನಚಿತ್ರ ನಿರ್ದೇಶಕನಾಗಿ ತಮಗಿರುವ ಜವಾಬ್ದಾರಿಯ ಬಗ್ಗೆ ನಿರ್ದೇಶಕ ಜಿಗರ್ ನಂದಾ ಮಾತನಾಡಿದರು.
ರಾಜಸ್ಥಾನದ ಉದಯಪುರದವರಾದ ಜಿಗರ್, ಅರಾವಳಿ ಬೆಟ್ಟಗಳಿಂದ ಆವೃತವಾದ ತಮ್ಮ ಹಳ್ಳಿಯ ಸಮೀಪದಲ್ಲೇ ನಿರಂತರ ಗಣಿಗಾರಿಕೆಯಿಂದಾಗಿ ಪರ್ವತಗಳು ಕ್ರಮೇಣ ನಾಶವಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದರು. ಮುಂಬರುವ ದಶಕಗಳಲ್ಲಿ ಈ ಭೂದೃಶ್ಯಗಳು ಸಂಪೂರ್ಣವಾಗಿ ಕಣ್ಮರೆಯಾಗಬಹುದು ಎಂಬ ಭಯವು ಈ ಸಿನಿಮಾ ಮಾಡಲು ಅವರಿಗೆ ಪ್ರೇರಣೆಯಾಯಿತು.
ಚಿತ್ರಕ್ಕೆ ವೇದಿಕೆಯನ್ನು ಒದಗಿಸಿದ ಚಲನಚಿತ್ರೋತ್ಸವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ʼಪರಿಸರಕ್ಕೆ ಸಂಬಂಧಿಸಿದ ಕಥೆಗಳು ಭಾರತದಲ್ಲಿ ವಿರಳವಾಗಿ ಗಮನ ಸೆಳೆಯುತ್ತವೆ. ಏಕೆಂದರೆ, ಪರಿಸರ ಹಾನಿಯು ದಶಕಗಳ ಕಾಲ ನಿಧಾನವಾಗಿ ತೆರೆದುಕೊಳ್ಳುತ್ತದೆಯೇ ಹೊರತು ತಕ್ಷಣದ ಪರಿಣಾಮಗಳನ್ನು ನೀಡುವುದಿಲ್ಲʼ ಎಂದು ಅವರು ಅಭಿಪ್ರಾಯಪಟ್ಟರು.
ಈ ಚಲನಚಿತ್ರವು ಅರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಮೇಲೆ ಕೇಂದ್ರೀಕರಿಸಿದೆ ಎಂದ ಅವರು, ʼಇದು ದೇಶದಲ್ಲಿ ಇಂದಿಗೂ ತೀವ್ರ ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಅಲ್ಪಾವಧಿಯ ಆರ್ಥಿಕ ಲಾಭದ ದೃಷ್ಟಿಯಿಂದ ಆಕ್ರಮಣಕಾರಿ ಗಣಿಗಾರಿಕೆಯ ದೀರ್ಘಕಾಲೀನ ಪರಿಣಾಮಗಳನ್ನು ಹೇಗೆ ನಿರ್ಲಕ್ಷಿಸಲಾಗುತ್ತದೆʼ ಎಂಬ ಬಗ್ಗೆ ಜಿಗರ್ ಆತಂಕ ವ್ಯಕ್ತಪಡಿಸಿದರು.
ʼಗಣಿಗಾರಿಕೆಯು ಜೀವನೋಪಾಯ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆಯಾದರೂ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಕಣ್ಮರೆಯಾಗುತ್ತಿರುವ ಪರ್ವತಗಳು ಮತ್ತು ಮಳೆ ಮಾದರಿಯಲ್ಲಿನ ಬದಲಾವಣೆಗಳಂತಹ ಅದರ ಪರಿಸರ ವೆಚ್ಚಗಳನ್ನು ಮುಂದಿನ ಪೀಳಿಗೆಗಳು ಮೌನವಾಗಿ ಅನುಭವಿಸಬೇಕಾಗುತ್ತದೆ’ ಎಂದು ಅವರು ಒತ್ತಿ ಹೇಳಿದರು.
ಈ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳನ್ನು ಬೆಂಬಲಿಸುವ ಜೊತೆಗೆ ಪ್ರಕೃತಿಯನ್ನು ರಕ್ಷಿಸುವ ಸುಸ್ಥಿರ ಗಣಿಗಾರಿಕೆ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಅವರ ಮುಖ್ಯ ಉದ್ದೇಶವಾಗಿದೆ.
ʼಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತು. ಸ್ಫೋಟಗಳು ಮತ್ತು ಯಂತ್ರೋಪಕರಣಗಳ ನಡುವೆ ಕೆಲಸ ಮಾಡುವುದು ಅಪಾಯಕಾರಿಯಾಗಿದ್ದು, ಚಿತ್ರದಲ್ಲಿ ಬಾಲ ನಟನಿದ್ದರಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿತ್ತು. ಗಣಿಗಾರಿಕೆಯನ್ನು ತೆರೆಯ ಮೇಲೆ ಹೇಗೆ ತೋರಿಸಲಾಗುತ್ತದೆ ಎಂಬ ಬಗ್ಗೆ ಗಣಿ ಮಾಲೀಕರಲ್ಲಿನ ಆತಂಕದ ಕಾರಣದಿಂದಾಗಿ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಕಷ್ಟಕರವಾಗಿತ್ತು. ತಮ್ಮ ಉದ್ದೇಶ ಗಣಿಗಾರಿಕೆಯನ್ನು ರಾಕ್ಷಸೀಕರಿಸುವುದಲ್ಲ, ಬದಲಿಗೆ ಪರಿಸರವನ್ನು ನಾಶಪಡಿಸದೆ ಅದನ್ನು ಜವಾಬ್ದಾರಿಯುತವಾಗಿ ಹೇಗೆ ನಿರ್ವಹಿಸಬಹುದು ಎಂದು ಅನ್ವೇಷಿಸುವುದಾಗಿದೆʼ ಎಂದು ಜಿಗರ್ ಸ್ಪಷ್ಟಪಡಿಸಿದರು.













