

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಸಿನಿಮಾ ಶಿಕ್ಷಕರಾಗಿದ್ದ ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಿಸುವ ಮೂಲಕ ಸಿನಿಮಾ ಕಟ್ಟುವ ಕ್ರಮನ್ನು ಕಲಿಸಿಕೊಟ್ಟರು. ದಾರಿ ಅರ್ಥ ಮಾಡಿಕೊಳ್ಳದೆ ಇದ್ದರೆ ಗುರಿ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿಕೊಟ್ಟರು. ಸಿನಿಮಾ ಎಂದರೆ ಕತೆ ಮಾತ್ರವೇ ಅಲ್ಲ, ರಿದಂ, ಸಮತೋಲನ ಎಲ್ಲವೂ ಹೌದು. ಅವೆಲ್ಲವನ್ನೂ ಅರ್ಥ ಮಾಡಿಕೊಂಡರೆ ಸಿನಿಮಾ ಕಟ್ಟುವ ಕ್ರಮವನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಸಿದರು’ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಿನಿಮಾ ಶಿಕ್ಷಕ ಮತ್ತು ಸಿನಿಮಾ ವಿಮರ್ಶಕ ಸತೀಶ್ ಬಹಾದುರ್ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ನಡೆದ ಗೋಷ್ಠಿಯಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯ ಕುರಿತು ಅವರು ಮಾತನಾಡಿದರು.
‘ಸತೀಶ್ ಬಹಾದುರ್ ಅವರು ಸಿನಿಮಾ ವಿಶ್ಲೇಷಣೆಯ ಶಿಕ್ಷಕರಾಗಿದ್ದರು. ಸಿನಿಮಾ ಅನ್ನುವುದು ಅನುಭವ ಮತ್ತು ಪ್ರದರ್ಶಕ ಕಲೆಯೂ ಹೌದು. ಸಿನಿಮಾ ಪ್ರೇಕ್ಷಕನಿಗೆ ಅನುಭವ ಕಟ್ಟಿಕೊಡಬಲ್ಲ ಸಿನಿಮಾ ಹೇಗೆ ರೂಪಿಸಬೇಕು ಅನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಅವರನ್ನು ಫಾದರ್ ಆಫ್ ಫಿಲ್ಮ್ ಅಪ್ರಿಸಿಯೇಷನ್ ಅಂತ ಕರೆಯುತ್ತಾರೆ. ಆದರೆ ಅದು ಸರಿಯಲ್ಲ, ಅವರು ಫಾದರ್ ಆಫ್ ಫಿಲ್ಮ್ ಅನಾಲಿಸಿಸ್’ ಎಂದು ಅವರು ಹೇಳಿದರು. ಸುದೀರ್ಘವಾಗಿ ಮಾತನಾಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಸತೀಶ್ ಬಹಾದುರ್ ಅವರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಸಿನಿಮಾ ವಿಮರ್ಶಕ, ಬೆಂಗಳೂರು ಚಿತ್ರೋತ್ಸವದ ಮಾಜಿ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು ಮಾತನಾಡಿ, ‘ಸಿನಿಮಾ ಅನುಭವವನ್ನು ದಾಖಲಿಸುವುದು ಮುಖ್ಯ. ಸಿನಿಮಾವನ್ನು ಓದುವ ಕ್ರಮವನ್ನು, ಅನುಭವ ಅರ್ಥ ಮಾಡಿಕೊಳ್ಳುವ ವಿಧಾನವನ್ನು, ಸಿನಿಮಾವನ್ನು ನೋಡುವ, ಅರಿಯುವ ಅಭ್ಯಾಸ ಬೆಳೆಸುವ ವಿಚಾರದಲ್ಲಿ ಸತೀಶ್ ಬಹಾದುರ್ ಒಂದು ಅಪ್ರತಿಮ ದಾರಿಯನ್ನು ಹಾಕಿಕೊಟ್ಟರು. ಕ್ಲಾಸಿಕಲ್ ಸಿನಿಮಾವನ್ನು ನಮ್ಮದಾಗಿಸುವ ಬಗೆಯನ್ನು ದಶಕಗಳ ಕಾಲ ಕಲಿಸಿಕೊಟ್ಟರು. ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ. ಆಗ ಬೇರೆಯದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಒದಗುತ್ತದೆ’ ಎಂದು ಅವರು ಹೇಳಿಕೊಟ್ಟರು.
ಹಿರಿಯ ಛಾಯಾಗ್ರಾಹಕರಾದ ಜಿ ಎಸ್ ಭಾಸ್ಕರ್ ಅವರು, ತಮ್ಮ ಮತ್ತು ಸತೀಶ್ ಬಹಾದುರ್ ಅವರ ನಡುವಿನ ಒಡನಾಟ ನೆನಪಿಸಿಕೊಂಡರು. ಆಪ್ತವಾಗಿ ಕಾರ್ಯಕ್ರಮ ನಿರ್ವಹಿಸಿದರು.













