ಚಿಕ್ಕಮಗಳೂರು ಎ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ ಇಂದು (ಎ.10) ರಂದು ಪತ್ತೆಯಾಗಿದೆ. ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿರುವುದು ವರದಿಯಾಗಿದೆ.


ಎ.7 ರಂದು ಚಿಕ್ಕಮಗಳೂರು ನಗರಕ್ಕೆ ಬಂದಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದ ಇದ್ದಿದ್ದು, ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಈ ಘಟನೆ ನಂತರ ಪೊಲೀಸರ ತಂಡ ಹುಡುಗಿಗಾಗಿ ಹುಡುಕಾಟ ಮಾಡಿದ್ದು, ಇದೀಗ ಹುಡುಗಿಯ ಮೃತದೇಹ ಪತ್ತೆಯಾಗಿದೆ.
ಸತತ ಮೂರು ದಿನಗಳ ಕಾಲ ನಡೆಸಿದ ತೀವ್ರ ಶೋಧದ ನಂತರ, ಇಂದು ಬಾಲಕಿಯ ಮೃತದೇಹವು ಮಾಣಿಕ್ಯಧಾರಾದ ಆಳವಾದ ಪ್ರಪಾತದ ಕೆಳಗೆ ದೊರಕಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎನ್ನುವುದು ತನಿಖೆ ಮೂಲಕ ತಿಳಿದು ಬರಬೇಕಿದೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

