Udupi : ಡೆಲಿವರಿ ಬಾಯ್ ಒಬ್ಬ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಕೇಶ್ ಮಿಶ್ರ ಎಂಬುವವರಿಗೆ ‘ನಿನ್ನ ಹೆಂಡತಿಯನ್ನು ನಾನು ಪ್ರೀತಿಸುವೆ. ಆಕೆಯನ್ನು ನನಗೆ ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವೆ’ ಎಂದು ಕಂಡ ಕಂಡಲ್ಲಿ ಚೂರಿ ಇರಿದು ಕೊಲೆ ಯತ್ನ ನಡೆಸಿರುವ ಘಟನೆ ಮಂಗಳೂರಿನ ಪಡುಬಿದ್ರೆಯಲ್ಲಿ ನಡೆದಿದೆ.

ಹೌದು, ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಒಂದು ಘಟನೆ ನಡೆದಿದೆ. ನಿನ್ನ ಹೆಂಡ್ತಿಯನ್ನು ನಾ ಪ್ರೀತಿಸುವೆ. ನೀನು ಆಕೆಯನ್ನು ಬಿಟ್ಟು ಬಿಡು. ಇಲ್ಲದಿದ್ದಲ್ಲಿ ಜೀವ ಸಹಿತ ಬಿಡಲಾರೆ ಎಂದ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಆದ ಮಂಜರಪಲ್ಕೆ ನಿವಾಸಿ ಮೋಹನಚಂದ್ರ (26) ಇನ್ನ ಗ್ರಾಮದ ಆಶಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ನಿಶಾ ಮಿಶ್ರಾ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಾಕೇಶ್ ಮಿಶ್ರಾ (39) ಎಂಬವರಿಗೆ ಸಿಕ್ಕ ಸಿಕ್ಕಲ್ಲಿ ಚೂರಿಯಿಂದ ಇರಿದು ಘಾಸಿಗೊಳಿಸಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಎಡೆಮರಿ ಕಟ್ಟಿ ನಿನ್ನೆ (ಮಾ.4) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಏನಿದು ಘಟನೆ?
ರಾಕೇಶ್ ಮಿಶ್ರ ಅವರು ಕಾಂಜರಕಟ್ಟೆಯ ಬ್ರೈಟ್ಫ್ಲೆಕ್ಸ್ ಕಂಪೆನಿಯಲ್ಲಿ 2018ರಿಂದ ಉದ್ಯೋಗಿ. ಇನ್ನಾ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಮಾ. 3ರಂದು ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಹಿಂದಿರುವಾಗ ಮೋಹನಚಂದ್ರ, ರಾಕೇಶ್ ಮಿಶ್ರಾ ಅವರ ಬೈಕನ್ನು ತಡೆದು ನಿಲ್ಲಿಸಿ ತನ್ನ ಮೊಬೈಲ್ನಲ್ಲಿ ರಾಕೇಶ್ ಮಿಶ್ರಾ ಅವರ ಪತ್ನಿಯ ಫೋಟೋವನ್ನು ತೋರಿಸಿದ್ದಾನೆ. ಆಗ ರಾಕೇಶ್ ಮಿಶ್ರಾ ಪ್ರಶ್ನಿಸಿದಾಗ ಪ್ರೀತಿಯ ನೆಪವೊಡ್ಡಿ ಆಕೆಯನ್ನು ಬಿಡಲು ಒತ್ತಾಯಿಸಿ ಇಲ್ಲವಾದಲ್ಲಿ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾನೆ.
ತನ್ನ ಪತ್ನಿ ಅಂತಹವಳಲ್ಲವೆಂದು ಮಿಶ್ರಾ ಹೇಳಿ ಬೈಕಲ್ಲಿ ಹೊರಡುವಷ್ಟರಲ್ಲಿ ಆರೋಪಿ ತನ್ನಲ್ಲಿದ್ದ ಚೂರಿಯಿಂದ ರಾಕೇಶ್ ಅವರ ಕುತ್ತಿಗೆಗೆ, ಎಡ ಕೆನ್ನೆಯ ಕೆಳಭಾಗಕ್ಕೆ, ಎಡ ಪಕ್ಕೆಲುಬಿನ ಬಳಿ, ಬಲಭುಜದ ಹಿಂಬದಿಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಅಲ್ಲಿಂದ ಬೈಕ್ ಸಹಿತ ಮನೆಗೆ ಹೋಗಿದ್ದ ರಾಕೇಶ್ ಮಿಶ್ರಾ ಅವರನ್ನು ಪತ್ನಿ ನಿಶಾ ಮಿಶ್ರಾ ಅವರೇ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

