ಪುತ್ತೂರು: ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಳ್ಯ ನ್ಯಾಯಾಲಯದಿಂದ 15 ದಿನಗಳ ಕಾಲ ʼಸಮುದಾಯ ಸೇವೆʼ ಶಿಕ್ಷೆಗೆ ಒಳಪಟ್ಟಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ನಡೆದಿದೆ.

ಸುಳ್ಯ ನಿವಾಸಿ ರಕ್ಷಿತ್ ಜಿ (29) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಸುಳ್ಯದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ. ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಜೆಎಂಎಫ್ಸಿ ನ್ಯಾಯಾಲಯವು ರಕ್ಷಿತ್ಗೆ 15 ದಿನಗಳ ಕಾಲ ಸುಳ್ಯ ಪೇಟೆಯಲ್ಲಿ ನಿಂತು ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ಶಿಕ್ಷೆ ವಿಧಿಸಿತ್ತು. ಅದರಂತೆ ಮಾರ್ಚ್ 15 ರಂದು ರಕ್ಷಿತ್ ಸುಳ್ಯ ಪೇಟೆಯ ಜಂಕ್ಷನ್ನಲ್ಲಿ ನಿಂತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.
ರಕ್ಷಿತ್ ರಸ್ತೆಯಲ್ಲಿ ಬೋರ್ಡ್ ಹಿಡಿದು ನಿಂತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಿಂದ ರಕ್ಷಿತ್ ಬೇಸರಗೊಂಡಿದ್ದರು. ಮಾನಸಿಕವಾಗಿ ನೊಂದ ರಕ್ಷಿತ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಕೂಡಲೇ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
