ಶಿವಮೊಗ್ಗ: ಜಿಲ್ಲೆ ಶಿಕಾರಿಪುರದ ಗಗ್ರಿ ಪ್ರದೇಶದಲ್ಲಿ ರಂಜಾನ್ ಹಬ್ಬಕ್ಕೆ ದೇಣಿಗೆ ಸಂಗ್ರಹ ಮಾಡುವ ವಿಚಾರಕ್ಕೆ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.
ಪ್ರಕರಣಕ್ಕೆ ಕುರಿತಂತೆ 10 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ರಂಜಾನ್ ಹಬ್ಬಕ್ಕೆ ಪ್ರತಿ ಕುಟುಂಬ ಒಂದು ಸಾವಿರ ರೂ. ದೇಣಿಗೆ ನೀಡಬೇಕು ಎಂದು ಮಸೀದಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇನ್ನೊಂದು ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ಆರಂಭವಾಗಿದೆ.
ಶಿಕಾರಿಪುರ-ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಎರಡು ಗುಂಪುಗಳು ಕಲ್ಲು, ಕೋಲು ಸೇರಿ ಕೈಗೆ ದೊರಕಿದ ವಸ್ತುಗಳನ್ನು ಎಸೆದಿದ್ದು, ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಸಂಚಾರ ಕೂಡಾ ಸ್ಥಗಿತಗೊಂಡಿತ್ತು. ನಂತರ ಶಿಕಾರಿಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಈ ಘಟನೆಗೆ ಸಂಬಂಧ ಪಟ್ಟಂತೆ 10 ಮಂದಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

