ಸವಣೂರು: ಹಳೆಯ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ಸವಣೂರು ಪೇಟೆಯಲ್ಲಿ ನಡೆದಿದೆ. ಈ ಕುರಿತು ಇಬ್ಬರು ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.

ಕುದ್ಮಾರು ನಿವಾಸಿಯಾಗಿರುವ ಮೋನಪ್ಪ ಗೌಡ (32) ಎನ್ನುವವರು ಮೊಟ್ಟೆ ವ್ಯಾಪಾರ ಮಾಡುತ್ತಿದ್ದು, ಇವರಿಂದ ಪರಿಚಿತಗೊಂಡ ವ್ಯಕ್ತಿ ಮೋಕ್ಷಿತ್ ಇಡ್ಯಾಡಿ ಎನ್ನುವವರು ಒಂದು ವರ್ಷದ ಹಿಂದೆ 50 ಸಾವಿರ ರೂ. ಸಾಲ ಪಡೆದಿದ್ದರು. ಹಲವು ಬಾರಿ ಹಣ ವಾಪಸ್ ಕೇಳಿದರೂ ಮೋಕ್ಷಿತ್ ಸ್ಪಂದಿಸಲಿಲ್ಲ.
ಮೋನಪ್ಪ ಗೌಡ ಅವರು ಇತ್ತೀಚೆಗೆ ವ್ಯಾಪಾರದ ಕೆಲಸದ ನಿಮಿತ್ತ ಸವಣೂರು ಪೇಟೆಗೆ ಹೋದಾಗ, ಅಲ್ಲಿನ ಬೇಕರಿಯಲ್ಲಿ ಮೋಕ್ಷಿತ್ ಕಾಣಸಿಕ್ಕಿದ್ದಾರೆ. ಈ ವೇಳೆ ಮೋನಪ್ಪ ಅವರು ಸಾಲದ ಹಣದ ಕುರಿತು ಪ್ರಶ್ನೆ ಮಾಡಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರ ಮಧ್ಯೆ ಜಗಳ ಆಗಿದೆ. ತಮ್ಮ ವಾಹನದ ಬಳಿ ಮೋನಪ್ಪ ಅವರು ಹೋಗುತ್ತಿದ್ದಾಗ ಮೋಕ್ಷಿತ್ ಮತ್ತು ಆತನ ತಮ್ಮ ರಂಜಿತ್ ಸೇರಿ ಮರದ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ತಡೆಯಲು ಬಂದ ಮೋನಪ್ಪ ಅವರ ಅಣ್ಣ ನಾರಾಯಣ ಗೌಡರ ಮೇಲೆಯೂ ಹಲ್ಲೆಗೆ ಯತ್ನ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿರುವ ಕುರಿತು ವರದಿಯಾಗಿದೆ.
ಗಲಾಟೆ ಜೋರಾಗುತ್ತಿರುವುದನ್ನು ಕಂಡು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುವುದನ್ನು ಕಂಡು ಆರೋಪಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಮೋನಪ್ಪ ಗೌಡ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

