ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರ್ನಲ್ಲಿ ಮಾರ್ಚ್ 12 ರಂದು ಸಂಜೆ ನಡೆದ ಹಿಟ್ ಆಂಡ್ ರನ್ ಕೇಸ್ಗೆ ದೊಡ್ಡ ತಿರುವು ದೊರಕಿದೆ. ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನ ಮಾಡಿ ಕಾರನ್ನು ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಕ ಎಂದು ವರದಿಯಾಗಿದೆ. ವಾಹನ ನೀಡಿದ ಮಾಲಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಮಾ.12 ರಂದು ಸಂಜೆ ಪುತ್ತೂರು ಕಡೆಯಿಂದ ಬಂದ ಕೆಎ 04 ಎಂಎಲ್ 4745 ನೋಂದಣಿಯ ಮಾರುತಿ ಸ್ವಿಫ್ಟ್ ಕಾರು ಸಂಟ್ಯಾರ್ನ ಪಾಣಾಜೆ ರಸ್ತೆಯ ವೃತ್ತದ ಬಳಿ ಕೆಎ14X 1092 ನೋಂದಣಿಯ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಕಾರ್ತಿಕ್ ಹಾಗೂ ಸಹಸವಾರ ರವಿ ಗಾಯಗೊಂಡಿದ್ದಾರೆ. ನಂತರ ಅಲ್ಲೇ ಇದ್ದ ಮಾರುತಿ ಆಲ್ಟೋ800 ಕಾರು ಮತ್ತು ಆರು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಲವು ಬೈಕ್ಗಳು ಚರಂಡಿಗೆ ಎಸೆಯಲ್ಪಟ್ಟಿದ್ದು, ಜನರ ಓಡಾಟ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತ ನಡೆದ ನಂತರ ಕಾರಿನ ಚಾಲಕ ಕಾರನ್ನು ನಿಲ್ಲಸಿದೆ ಪಾಣಾಜೆ ರಸ್ತೆಯಲ್ಲಿ ಹೋಗಿದ್ದಾನೆ. ಸಂಟ್ಯಾರ್ನಿಂದ ಚೆಲ್ಯಡ್ಕ, ಉಪ್ಪಳಿಗೆ, ಶೇಖಮಲೆ ರಸ್ತೆಯಾಗಿ ಕೌಡಿಚ್ಚಾರ್ ಮೂಲಕ ಪಟ್ಟೆ ರಸ್ತೆಯಲ್ಲಿ ಹೋಗಿದ್ದು, ಈ ಮಾರ್ಗದಲ್ಲಿ ಕೂಡಾ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಆದರೆ ಪೆರಿಗೇರಿ ಸಮೀಪ ಹೊಸನಗರದಲ್ಲಿ ಸ್ಥಳೀಯ ಯುವಕರು ಕಾರನ್ನು ತಡೆದು ನಿಲ್ಲಿಸಿದ್ದು, ಕಾರಿನಲ್ಲಿ ಚಾಲಕ ಸೇರಿ ನಾಲ್ವರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ವರದಿಯಾಗಿದೆ.
ಬೈಕ್ ಸಹಸವಾರ ಬಂಟ್ವಾಳ ನಿವಾಸಿ ರವಿ ಬಿ (27) ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ತನಿಖೆ ವೇಳೆ ಕಾರು ಚಾಲಕ ಅಪ್ರಾಪ್ತ ವಯಸ್ಕ ಎಂದು ತಿಳಿದು ಬಂದ ಕಾರಣ ವಾಹನದ ಮಾಲೀಕರಾದ ಪುತ್ತೂರು ನಿವಾಸಿ ಕೆ.ಎ.ಮಮತಾಜ್ (42) ಅಪ್ರಾಪ್ತ ಬಾಲಕನ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

