Belagavi: ಮಗಳನ್ನು ಮದುವೆ ಮಾಡಿ ಕೊಡುವುದಕ್ಕೆ ಆಕೆಯ ಮನೆಯವರು ನಿರಾಕರಿಸಿದರು ಎಂದು ಯುವತಿ ಹಾಗೂ ಅವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೀರಪ್ಪ ಗಣೇಶಗೋಳ ಎಂಬಾತ ವಿದ್ಯಾಶ್ರೀ ಕಿಲಾರಿ ಎಂಬ ಯುವತಿಯನ್ನು ತನಗೆ ಮದುವೆ ಮಾಡಿಕೊಡಲ್ಲ ಎಂದು ಯುವತಿ ಹಾಗೂ ಮನೆಯವರ ಮೇಲೆ ಆರೋಪಿ ಜನರನ್ನು ಕರೆದುಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಬೀರಪ್ಪ ಗಣೇಶಗೋಳ ಕಳೆದೆರಡು ವರ್ಷಗಳಿಂದ ಯುವತಿ ವಿದ್ಯಾಶ್ರೀ ಕಿಲಾರಿ ಎಂಬಾಕೆಯನ್ನು ಮದುವೆ ಮಾಡಿ ಕೊಡುವಂತೆ ಆಕೆಯ ಪೋಷಕರ ಬಳಿ ಕೇಳಿದ್ದ. ಆದರೆ ಬೀರಪ್ಪನಿಗೆ ಮಗಳನ್ನು ಕೊಡುವುದಕ್ಕೆ ಪೋಷಕರು ಹಿಂದೇಟು ಹಾಕಿದ್ದರು. ಇದರಿಂದ ಸಿಟ್ಟು ಹಾಗೂ ಆಕ್ರೋಶಕ್ಕೆ ಒಳಗಾದ ಬೀರಪ್ಪ ಗಣೇಶಗೋಳ, ವಿದ್ಯಾಶ್ರೀ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ್ದಾನೆ.
ಹತ್ತು ಜನರೊಂದಿಗೆ ಆಗಮಿಸಿದ ಆರೋಪಿ ಬೀರಪ್ಪ ನಿನ್ನೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ, ಯುವತಿ ವಿದ್ಯಾಶ್ರೀಯ ತಲೆಯನ್ನೇ ಒಡೆದಿದ್ದಾನೆ. ಮನೆಯವರ ಕಣ್ಣಿಗೆ ಖಾರದ ಪುಡಿ ಎರಚಿ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಗಾಯಾಳುಗಳನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಬೀರಪ್ಪ ಗಣೇಶಗೋಳ ವಿರುದ್ಧ ಪ್ರಕರಣ ದಾಖಲಾಗಿದೆ.

