ಮಂಗಳೂರು: ಬೆಂದೂರುವೆಲ್ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ಸಂದರ್ಭದಲ್ಲಿ ಶಿಶು ಸಾವಿಗೀಡಾದ ಘಟನೆ ನಡೆದಿರುವ ಆರೋಪ ವರದಿಯಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಕೋಡಿಕಲ್ ನಿವಾಸಿ ದಂಪತಿಯು ಮೊದಲ ಮಗುವಿನ ಹೆರಿಗಾಗಿ ಸೋಮವಾರ ಗರ್ಭಿಣಿಯನ್ನು ಮಧ್ಯಾಹ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ 2 ಗಂಟೆ ಸುಮಾರಿಗೆ ಹೆರಿಗೆ ನಡೆದಿದೆ. ಕುಟುಂಬದವರ ಪ್ರಕಾರ ಎಲ್ಲವೂ ಸಾಮಾನ್ಯವಾಗಿದ್ದಂತೆ ತಿಳಿಸಲಾಗಿದೆ. ಆದರೆ ಬೆಳಿಗ್ಗೆ ವೈದ್ಯರು ಮಗು ಸಾವಿಗೀಡಾಗಿರುವ ವಿಷಯವನ್ನು ತಿಳಿಸಿದ್ದಾರೆ.
ಮಗು ಸಾವಿಗೆ ವಿವಿಧ ವೈದ್ಯಕೀಯ ಕಾರಣಗಳನ್ನು ನೀಡಿದ್ದಾರೆ. ಆದರೆ ಮಗುವಿನ ತಲೆ ಭಾಗದಲ್ಲಿ ಗಾಯಗಳು ಕಂಡು ಬಂದಿದ್ದು, ಮನೆಯವರ ಅನುಮಾನಕ್ಕೆ ಕಾರಣವಾಗಿದೆ. ಹೆರಿಗೆ ಸಂದರ್ಭ ವ್ಯಾಕ್ಯೂಮ್ ಬಳಸಿ ತಲೆ ಭಾಗವನ್ನು ಜೋರಾಗಿ ಎಳೆದ ಪರಿಣಾಮ ಮಗುವ ಸಾವಿಗೀಡಾಗಿರಬಹುದೇ ಎಂದು ಆರೋಪ ಮಾಡಿದ್ದಾರೆ.
ಆಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

