

ಮಂಗಳೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀರು ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ.
ಭಾನುವಾರ ಮುಂಜಾನೆ ರಾತ್ರಿ ಗಸ್ತಿನಲ್ಲಿದ್ದ ಕದ್ರಿ ಠಾಣೆಯ ಪೊಲೀಸರಿಗೆ ಅಕ್ರಮ ಜಾನುವಾರು ಸಾಗಾಟದ ಖಚಿತ ಮಾಹಿತಿ ಲಭಿಸಿದ್ದು, ಕೂಡಲೇ ಪೊಲೀಸರು ನಂತೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು, ಆ ಮಾರ್ಗವಾಗಿ ಬಂದ ಲಾರಿಯನ್ನು ತಡೆದು ತಪಾಸಣೆ ಮಾಡಿದರು.
ಲಾರಿ ಪರಿಶೀಲನೆ ಸಂದರ್ಭದಲ್ಲಿ ಜಾನುವಾರುಗಳ ಕೈ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ, ಉಸಿರುಗಟ್ಟುವಂತೆ ಅತ್ಯಂತ ಕ್ರೂರವಾಗಿ ತುಂಬಿಸಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಲಾರಿಯಲ್ಲಿದ್ದ 34 ಗೋವುಗಳನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಮೈಸೂರು ಮೂಲದ ದಸ್ತಗೀರ್ ಸಾಬ್ (45), ಖತೀಬ್ ಪಾಷಾ ಹಾಗೂ ಅಯೂಬ್ ಖಾನ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ.
ಆರೋಪಿಗಳು ಈ ಗೋವುಗಳನ್ನು ಶಿವಮೊಗ್ಗದಿಂದ ಮೂಡುಬಿದಿರೆ ಹಾಗೂ ಮಂಗಳೂರು ಮಾರ್ಗವಾಗಿ ಕೇರಳದ ಗಡಿಭಾಗ ಹೊಸಂಗಡಿಗೆ ಸಾಗಾಟ ಮಾಡುತ್ತಿದ್ದರು. ಹೊಸಂಗಡಿಯಲ್ಲಿ ಜಾನುವಾರುಗಳನ್ನು ವಧಿಸಿ, ಮಾಂಸ ಪೂರೈಕೆ ಮಾಡಲು ಯೋಜನೆ ರೂಪಿಸಿದ್ದರು ಎನ್ನುವುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
ಅಕ್ರಮ ಜಾನುವಾರು ಸಾಗಾಟ ಹಾಗೂ ಪ್ರಾಣಿ ಹಿಂಸೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
