ಬಾಗಲಕೋಟೆ: ಮಸೀದಿ ಗೋಡೆ ಮೇಲೆ ವ್ಯಕ್ತಿಯೊಬ್ಬ ತನ್ನ ಮಗನ ಕೈಯಿಂದ ಜೈಶ್ರೀರಾಮ್ ಎಂದು ಬರೆದಿದ್ದು, ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಬಾಗಲಕೋಟೆಯ ಸೆಕ್ಟರ್ 44 ರ ಮಸೀದಿ ಕಾಂಪೌಂಡ್ ಮೇಲೆ ಬರಹ ಬರೆದು ನಂತರ ಅಟೋದಲ್ಲಿ ತೆರಳುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ನವನಗರ ಠಾಣೆ ಪೊಲೀಸರು, ಯಮನೂರಿ ಹಾಗೂ ಆತನ ಮಗನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದರು. ಗೋಡೆ ಮೇಲೆ ಬರೆದಿದ್ದ ಬರಹವನ್ನು ನೀರು ಹಾಕಿ ಅಳಿಸಿದ್ದಾರೆ. 12 ವರ್ಷದ ಮಗುವಿನ ಕೈಯಿಂದ ಮಸೀದಿ ಗೋಡೆ ಮೇಲೆ ಜೈ ಶ್ರೀರಾಮ್ ಎಮದು ಬರೆದಿರುವ ಸಂಬಂಧ ಲಾಡಖಾನ್ ಎನ್ನುವವರು ನೀಡಿದ ದೂರಿನನ್ವಯ ನವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಕುರಿತು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರು ಈ ರೀತಿಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
