

ಬೆಂಗಳೂರು: ಟ್ಯೂಷನ್ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದಿದ್ದು, ಈ ಕಾರಣದಿಂದ 13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ತಮ್ಮನ ಜೊತೆ ಫ್ರೀ ಬಸ್ನಲ್ಲಿ ಊರುರು ಸುತ್ತಿರುವ ಘಟನೆ ನಡೆದಿದೆ.
ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ತೆರಳಿದ್ದ ಅಕ್ಕ ತಮ್ಮ ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಓಡಾಡಿದ್ದಾರೆ. ನಂತರ ಪೊಲೀಸರ ಸಹಕಾರದಿಂದ ಮಕ್ಕಳು ಅಂತಿಮವಾಗಿ ಮರಳಿ ಹೆತ್ತವರ ಮಡಿಲು ಸೇರಿದೆ.
ಆಧಾರ್ ಕಾರ್ಡ್ ತೋರಿಸಿ ಸರಕಾರಿ ಬಸ್ನಲ್ಲಿ ಬಾಲಕಿ ಉಚಿತ ಪ್ರಯಾಣವಿದ್ದರೆ, ತಮ್ಮನಿಗೆ ಟಿಕೆಟ್ ಮಾಡದೆ ಕರೆದುಕೊಂಡು ಹೋಗಿದ್ದಳು. ಇತ್ತ ಕಡೆ ಪೋಷಕರು ಮಕ್ಕಳು ಕಾಣೆಯಾಗಿರುವ ಕುರಿತು ಕಂಗಲಾಗಿ ಹುಡುಕಾಟ ಮಾಡಿ, ಕಡೆಗೆ ಹೆಚ್ಎಎಲ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲು ಮಾಡಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ರಾಜ್ಯಾದ್ಯಂತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.
ಮನೆಯಿಂದ ಬ್ಯಾಗ್ ಹಿಡಿದು ಮಕ್ಕಳು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈ ವಾಕ್ ಹತ್ತಿ ಬಂದಿದ್ದಾರೆ. ಅಲ್ಲಿಂದ ಮೆಜೆಸ್ಟಿಕ್ಗೆ ಬಂದು ನೇರವಾಗಿ ಶಿವಮೊಗ್ಗಕ್ಕೆ ಹೋಗಿದ್ದಾರೆ ಎನ್ನುವುದು ಸಿಸಿಟಿವಿ ಮೂಲಕ ಗೊತ್ತಾಗಿದೆ. ಹೀಗೆ ಬಸ್ ಹತ್ತಿಹೋದ ಇವರು ಭದ್ರಾವತಿಯಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ.
ಫೋಟೋದಲ್ಲಿರುವ ಮಕ್ಕಳು ಇವರಿಬ್ಬರೇ ಎನ್ನುವ ಕಾರಣದಿಂದ ಇಬ್ಬರನ್ನೂ ರಕ್ಷಣೆ ಮಾಡಿದ ಪೊಲೀಸರು ಭದ್ರಾವತಿಯಿಂದ ಹೆಚ್ಎಎಲ್ ಠಾಣೆಗೆ ಕರೆತರಲಾಗಿದೆ.













