ಸ್ವಯಂ ಘೋಷಿತ ದೇವಮಾನವ, ನಕಲಿ ಬಾಬಾ ಅಶೋಕ್ ಖಾರತ್ ಬಂಧನ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ಇನ್ನೋರ್ವ ನಕಲಿ ಬಾಬಾನ ಕರ್ಮಕಾಂಡ ಬಯಲಾಗಿರುವ ಕುರಿತು ವರದಿಯಾಗಿದೆ. ತಾನು ಶಿವ ಅವತಾರ ಎಂದು ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಇನ್ನೋರ್ವ ಸ್ವಯಂಘೋಷಿತ ದೇವಮಾನವನ್ನು ಪೊಲೀಸರು ಬಂಧನ ಮಾಡಿದ್ದಾರೆ.

ವಸೈಸಾಯಿಯ ಸ್ವಯಂ ಘೋಷಿತ ದೇವಮಾನವ ಹೃಷಿಕೇಶ್ ವೈದ್ಯ ಬಂಧಿತ ಆರೋಪಿ. 35 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಮಾಣಿಕ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಮಂಜರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧನ ಮಾಡಲಾಗಿದೆ.
ಆರೋಪಿ ಹೃಷಿಕೇಶ್ ವೈದ್ಯ ತಾನು ಶಿವನ ಅವತಾರ, ನೀನು ನನ್ನ ಪಾರ್ವತಿ ಎಂದು ಮಹಿಳೆಯನ್ನು ನಂಬಿಸಿ ಹೋಟೆಲ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ.
2023 ರಲ್ಲಿ ತನ್ನನ್ನು ಮೊದಲು ಪುಣೆಯ ಮಂಜರಿ ಪ್ರದೇಶದ ಲಾಡ್ಜ್ಗೆ ಕರೆದುಕೊಂಡು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇವರಿಬ್ಬರ ಪರಿಚಯ ಫೇಸ್ಬುಕ್ ಮೂಲಕ ಆಗಿದೆ. ಲಾಡ್ಜ್ಗೆ ಕರೆದುಕೊಂಡು ಹೋಗಿ ಅಲ್ಲಿ ಫೋಟೋಗಳನ್ನು ತೆಗೆದು ನನಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ನಂತರ 2025 ರಲ್ಲಿ ವಸೈನಲ್ಲಿರುವ ಲಾಡ್ಜ್ಗೆ ಇನ್ನೊಮ್ಮೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪ ಮಾಡಿದ್ದಾರೆ.

