ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಸಿಲುಕಿ, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು ಅದೇ ಯುವಕನೊಂದಿಗೆ ದೇಗುಲದಲ್ಲಿ ಮರುಮದುವೆಯಾಗಿದ್ದಾಳೆ.


ಚಿಕ್ಕಬಳ್ಳಾಪುರ ನಗರದಗಂಗನಮಿದ್ದೆಬಡಾವಣೆಯ ಪೇಂಟರ್ ದೀಪು ಹಾಗೂ ಇಲ್ಲಿನ ಕಂದವಾರಪೇಟೆಯ 18 ವರ್ಷದ ಯುವತಿಯು ಪರಸ್ಪರ ಪ್ರೀತಿ ಸುತ್ತಿದ್ದರು . ಹುಡುಗ ಪರಿಶಿಷ್ಟ ಜಾತಿ ಹಾಗೂ ಹುಡುಗಿ ಬಲಿಜ ಜನಾಂಗಕ್ಕೆ ಸೇರಿದ್ದು ಅಂತರ್ಜಾತಿಯ ವಿವಾಹಕ್ಕೆ ಹುಡುಗಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೂ ಜಗ್ಗದೇ ಪ್ರೇಮಿಗಳು ಮದುವೆಮಾಡಿಕೊಂಡು ಬಂದಿದ್ದರು. ಇದರ ನಡುವೆ ಪೊಲೀಸ್ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ವಿಚಾರಣೆ ಕೈಗೊಂಡಿದ್ದ ಸಂದರ್ಭದಲ್ಲಿ ಯುವತಿಯು ಪ್ರಿಯಕರಿನಿಗೆ ಕೈಕೊಟ್ಟಿದ್ದು ತಾಳಿ ಬಿಸಾಡಿ ಪಾಲಕರೊಂದಿಗೆ ತೆರಳಿದ್ದಳು.
ಹೆತ್ತವರ ಒತ್ತಾಯಕ್ಕೆ ಮಣಿದು ಅಂದು ತಾಳಿ ಕಿತ್ತುಹಾಕಿದ್ದರೂ ಕೀರ್ತನಾಳಿಗೆ ಸಂದೀಪ್ ಮೇಲಿದ್ದ ಪ್ರೀತಿ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ. ಕಳೆದ ಆರು ತಿಂಗಳಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಆಕೆ, ಇತ್ತೀಚೆಗೆ ”ನಿನ್ನನ್ನು ಬಿಟ್ಟು ನನಗಿರಲು ಸಾಧ್ಯವಿಲ್ಲ” ಎಂದು ಸಂದೀಪ್ಗೆ ಸ್ವತಃ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ತಕ್ಷಣವೇ ಮನೆ ಬಿಟ್ಟು ಹೊರಟುಬಂದ ಕೀರ್ತನಾ, ದೇವಸ್ಥಾನದ ಮುಂಭಾಗದ ರಸ್ತೆಯಲ್ಲೇ ನಿಂತು ಸಂದೀಪ್ ಕೈಯಿಂದ ಮತ್ತೊಮ್ಮೆ ತಾಳಿ ಕಟ್ಟಿಸಿಕೊಂಡಿದ್ದಾಳೆ. ಇಷ್ಟೇ ಅಲ್ಲದೆ, ಈ ಜೋಡಿ ಸದ್ಯ ಮರುಮದುವೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.
