ತಾವು ಪ್ರಯಾಣಿಸುವ ರೈಲಿಗೆ ಬೆಂಕಿ ಬಿದ್ದಿದೆ ಎಂದು ರೈಲಿನ ಪ್ರಯಾಣಿಕರು ಪಕ್ಕದ ಹಳಿಯ ಮೇಲೆ ಹಾರಿದ್ದು, ಅವರಲ್ಲಿ ನಾಲ್ಕು ಮಂದಿಗೆ ಬೇರೊಂದು ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ನಾಲ್ವರು ಯುವಕರು ಒಟ್ಟಾಗಿ ಖಜುರಾಹೊ-ಉದಯಪುರ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಕಿ ಬಿದ್ದಿದೆ ಎಂಬ ವದಂತಿಗೆ ಹೆದರಿದ ಅವರು ಸರಪಳಿ ಎಳೆದು ರೈಲು ನಿಲ್ಲಿಸಿ ಪಕ್ಕದ ಹಳಿಗೆ ಜಿಗಿದಿದ್ದಾರೆ. ಆಗ ಎದುರಿನಿಂದ ವೇಗವಾಗಿ ಬಂದ ಪಾತಾಳಕೋಟ್ ಎಕ್ಸ್ಪ್ರೆಸ್ ರೈಲು ಅವರಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಝಾನ್ಸಿ ರೈಲ್ವೆ ವಿಭಾಗದ ಹೈತಾಪುರ ಮತ್ತು ಧೋಲ್ಪುರ್ ನಡುವೆ ಸಂಜೆ ಸುಮಾರು 4.15ರ ಹೊತ್ತಿಗೆ ಈ ಘಟನೆ ಸಂಭವಿಸಿದೆ. ಸದ್ಯ, ಯುವಕರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
