ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಕೆ.ಜಿ.ಯಷ್ಟಿರುವ ಕಂಚಿನ ಹರಕೆ ಘಂಟಾಮಣಿಗಳ ವಿಲೇವಾರಿಗೆ ಜೂ.4ರಂದು ಅಧಿಕೃತ ಚಾಲನೆ ನೀಡಲಾಗಿದ್ದು, 3.51 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.


ಸೌತಡ್ಕ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ವಿಲೇವಾರಿಯಾಗದೆ ದಾಸ್ತಾನು ಇರಿಸಲಾಗಿದ್ದ ಸುಮಾರು 70 ಟನ್ ತೂಕದ ಘಂಟಾಮಣಿಗಳು 3,51,16,900 ರೂ.ಕ್ಕೆ ಹರಾಜಾಗಿದೆ. ಧಾರವಾಡದ ಈಶ್ವರ್ ಲಾಲ್ ಕನ್ಯಾಲಾಲ್ ಅಗ್ನಿಹೋತ್ರಿ ಅವರು ಅತಿ ಹೆಚ್ಚು ಬಿಡ್ ಸಲ್ಲಿಸಿದ್ದಾರೆ. 1 ಕೆ.ಜಿ.ಗೆ 425.14 ದರ ನಿಗದಿಪಡಿಸಲಾಗಿದೆ. ಶೇ.18 ಜಿಎಸ್ಟಿ ಸೇರಿ ಕಿಲೋಗ್ರಾಂಗೆ 501.67 ರಂತೆ ಒಟ್ಟು 3.51 ಕೋಟಿ ಮೊತ್ತಕ್ಕೆ ಘಂಟಾಮಣಿಗಳು ಮಾರಾಟಗೊಂಡಿವೆ ಎಂದು ಮೂಲಗಳು ತಿಳಿಸಿದೆ
ಜೂ.4ರಂದು ಬೆಳಗ್ಗಿನಿಂದಲೇ ವಿಲೇವಾರಿ ಕಾರ್ಯ ಆರಂಭಗೊಂಡಿದ್ದು, ಸುಮಾರು 2,800 ಬ್ಯಾಗ್ಗಳಲ್ಲಿ ಸಂಗ್ರಹಿಸಲಾಗಿದ್ದ ಘಂಟಾಮಣಿಗಳನ್ನು 3 ಲಾರಿಗಳಿಗೆ ತುಂಬಿಸಿ ಸಾಗಿಸುವ ಕಾರ್ಯ ನಡೆದಿದೆ. ಟೆಂಡರ್ದಾರರು ಏ.10 ಹಾಗೂ ಮೇ 5ರಂದು ಎರಡು ಕಂತುಗಳಲ್ಲಿ ಸಂಪೂರ್ಣ ಮೊತ್ತವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ದೇವಸ್ಥಾನದ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ವಿಲೇವಾರಿ ಪ್ರಕ್ರಿಯೆಯಾಗಿ ದಾಖಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ವಿಲೇವಾರಿ ಪ್ರಕ್ರಿಯೆ ನಡೆದಿದೆ.
ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡುವ ಉದ್ದೇಶದಿಂದ ಉಪ್ಪಿನಂಗಡಿ ಸಮೀಪದ ಮಠದಲ್ಲಿರುವ ಅಶೋಕ್ ಅವರ ಮಾಲಕತ್ವದ ವೇ ಬ್ರಿಡ್ಜ್ ನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ನಡೆಸಲಾಯಿತು. ಮೊದಲು ಖಾಲಿ ಲಾರಿಯ ತೂಕ ದಾಖಲಿಸಿ, ಬಳಿಕ ಘಂಟಾಮಣಿಗಳನ್ನು ತುಂಬಿದ ನಂತರ ಮರು ತೂಕ ಮಾಡುವ ಮೂಲಕ ನಿಖರ ತೂಕವನ್ನು ಖಚಿತಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣವೂ ನಡೆದಿದ್ದು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್, ತೂಕ ಮತ್ತು ಮಾಪನ ಇಲಾಖೆಯ ನಿರೀಕ್ಷಣಾಧಿಕಾರಿ ನರೇಂದ್ರ, ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಗಣೇಶ್ ಕಾಶಿ ಮತ್ತು ಸಮಿತಿಯ ಸದಸ್ಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳ ಸಮ್ಮುಖದಲ್ಲಿ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಘಂಟಾಮಣಿಗಳ ಮಾರಾಟದಿಂದ ಬಂದಿರುವ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲು ಆಡಳಿತ ಸಮಿತಿ ನಿರ್ಧಾರ ಕೈಗೊಂಡಿದೆ.

