ನಿರ್ಮಾಣ ಹಂತದ ಹೊಸ ಕಟ್ಟಡವೊಂದರ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಸಂತೋಷ್ ಪೂಜಾರಿ (45) ಗುರುವಾರ ಮೃತಪಟ್ಟಿದ್ದಾರೆ.


ಮೃತ ಸಂತೋಷ್ ಪೂಜಾರಿ ಅವರು ಉಳ್ಳಾಲ ಧರ್ಮನಗರದ ನಿವಾಸಿಯಾಗಿದ್ದು, ತೊಕ್ಕೊಟ್ಟಿನ ಪ್ರಸಿದ್ಧ ‘ಶಕ್ತಿ ಭಾರತ್ ವ್ಯಾಯಾಮ ಶಾಲೆ’ಯ ಸಕ್ರಿಯ ಸದಸ್ಯರಾಗಿದ್ದರು. ಪವರ್ ಲಿಫ್ಟಿಂಗ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು, ಜೀವನೋಪಾಯಕ್ಕಾಗಿ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು. ಗುರುವಾರ ಪದವಿನಂಗಡಿಯ ಹೊಸ ಕಟ್ಟಡವೊಂದರ 4 ನೇ ಮಹಡಿಯಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ನಾಲ್ಕನೇ ಮಹಡಿಯಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದರಿಂದ ಸಂತೋಷ್ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಳ್ಳಾಲಬೈಲ್ನ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಸಂತೋಷ್ ಸೀನಿಯರ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ್ದರು. ಕೆಲವು ವರ್ಷ ಕೊಲ್ಲಿ ರಾಷ್ಟ್ರದಲ್ಲಿ ಕೆಲಸ ಮಾಡಿದ್ದರು. 15 ವರ್ಷಗಳ ಹಿಂದೆ ಊರಿಗೆ ಮರಳಿ ಹರಿಪ್ರಿಯಾ ಎಂಜಿನಿಯರಿಂಗ್ ವರ್ಕ್ಸ್ ಆರಂಭಿಸಿದ್ದರು. ಈಚೆಗೆ ಮಾಸ್ಟರ್ಸ್ ವಿಭಾಗದಲ್ಲಿ ಪವರ್ ಲಿಫ್ಟಿಂಗ್ ಮಾಡುತ್ತಿದ್ದರು.
ಮಂಗಳೂರಿನಲ್ಲಿ ಈಚೆಗೆ ನಡೆದಿದ್ದ ರಾಜ್ಯ ಮಾಸ್ಟರ್ಸ್ ಕ್ಲಾಸಿಕ್ ಮತ್ತು ಇಕ್ವಿಪ್ಡ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದ ಸಂತೋಷ್ ಪೂಜಾರಿ ಔರಂಗಾಬಾದ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದರು. ಅಲ್ಲಿಗೆ ತೆರಳುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಸಾವಿನ ದವಡೆಗೆ ಸಿಲುಕಿದ್ದಾರೆ ಎಂದು ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ತಿಳಿಸಿದೆ.

