Home » ಮನೆಯಲ್ಲೇ ಗನ್ ತಯಾರಿಕೆ – ಪುಸ್ತಕದಂಗಡಿ ಹೆಸರಲ್ಲಿ ಮಾರಾಟ!!

ಮನೆಯಲ್ಲೇ ಗನ್ ತಯಾರಿಕೆ – ಪುಸ್ತಕದಂಗಡಿ ಹೆಸರಲ್ಲಿ ಮಾರಾಟ!!

0 comments

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ತಲ್ಲಣ ಸೃಷ್ಟಿಸಿರುವ, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಅಕ್ರಮ ನಾಡಬಂದೂಕು ತಯಾರಿಕೆ ಮತ್ತು ಮಾರಾಟ ಜಾಲವನ್ನು ಬೆಳಗಾವಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಮನೆಯನ್ನೇ ಗನ್ ಫ್ಯಾಕ್ಟರಿ ಮಾಡಿದ್ದ ಮಾರುತಿ ಸುತಾರ್
ಈ ಅಕ್ರಮ ಜಾಲದ ಮುಖ್ಯ ಸೂತ್ರಧಾರ ಕಟಗಲಿ ಗ್ರಾಮದ ಮಾರುತಿ ಸುತಾರ್. ಈತ 2024 ರಿಂದಲೇ ತನ್ನ ಸ್ವಗೃಹದಲ್ಲೇ ರಹಸ್ಯವಾಗಿ ತಾಂತ್ರಿಕ ಘಟಕ ಸ್ಥಾಪಿಸಿ ನಾಡಬಂದೂಕುಗಳನ್ನು ತಯಾರಿಸುತ್ತಿದ್ದ. ಸಿಂಗಲ್ ಲೋಡೆಡ್ ಹಾಗೂ ಡಬಲ್ ಲೋಡೆಡ್ ಬಂದೂಕುಗಳನ್ನು ತಯಾರಿಸುವುದರಲ್ಲಿ ಈತ ನಿಷ್ಣಾತನಾಗಿದ್ದ. ಪೊಲೀಸರು ಈತನ ಮನೆ ಮೇಲೆ ದಾಳಿ ಮಾಡಿದಾಗ ಒಂದು ಪಿಸ್ತೂಲ್ ಪತ್ತೆಯಾಗಿದ್ದು, ಆತ ಈಗಾಗಲೇ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಗಿರಾಕಿಗಳಿಗೆ ಮಾರಾಟ ಮಾಡಿದ್ದ ಇನ್ನು 8 ಪಿಸ್ತೂಲ್‌ಗಳನ್ನು ಪೊಲೀಸರು ವಿವಿಧೆಡೆ ದಾಳಿ ನಡೆಸಿ ರಿಕವರಿ ಮಾಡಿದ್ದಾರೆ.

ಮರ್ಡರ್ ಕೇಸ್ ತನಿಖೆ ವೇಳೆ ಸಿಕ್ಕಿತು ಸುಳಿವು!

ಖಾನಾಪುರ ತಾಲೂಕಿನಲ್ಲಿ 2024 ರಲ್ಲಿ ನಡೆದಿದ್ದ ಒಂದು ಭೀಕರ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಪೊಲೀಸರಿಗೆ, ಕೊಲೆಗೆ ಬಳಸಲಾದ ಮಾರಕಾಸ್ತ್ರದ ಮೂಲವನ್ನು ಹುಡುಕುತ್ತಾ ಹೋದಾಗ ಈ ಬೃಹತ್ ಗನ್ ನೆಟ್‌ವರ್ಕ್‌ನ ಸುಳಿವು ಸಿಕ್ಕಿದೆ

banner

ಬುಕ್ ಸ್ಟಾಲ್ ಹೆಸರಿನಲ್ಲಿ ಪಿಸ್ತೂಲ್‌ ದಂಧೆ!

ಈ ಅಕ್ರಮ ದಂಧೆಗೆ ಮರಿಯಪ್ಪ ನಾಯ್ಕ್ ಎಂಬಾತ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ. ವಿಶ್ವನಾಥ್ ದೇಸಾಯಿ ಇವರಿಗೆ ಗನ್ ಬಿಡಿಭಾಗಗಳನ್ನು ಸಪ್ಲೈ ಮಾಡುತ್ತಿದ್ದವನು. ಈತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕೇವಲ ಹೆಸರಿಗೊಂದು ‘ಬುಕ್ ಸ್ಟಾಲ್’ (Book Stall) ಇಟ್ಟುಕೊಂಡು, ಅದರ ಮರೆಯಲ್ಲಿ ಬಂದೂಕಿನ ಟ್ರಿಗರ್ ಹಾಗೂ ಸ್ಫೋಟಕಗಳನ್ನು ಮಾರಾಟ ಮಾಡುತ್ತಿದ್ದ!

ಈ ಕಥೆಯ ಅತಿ ದೊಡ್ಡ ಟ್ವಿಸ್ಟ್ ಎಂದರೆ, ಬಂದೂಕು ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಬೆಳಗಾವಿಯ ಪ್ರಸಿದ್ಧ ‘ಖಂಜಾರ್ ಗಲ್ಲಿ’ ಪ್ರದೇಶದಿಂದ ತರಲಾಗುತ್ತಿತ್ತು. 2021 ರಲ್ಲೇ ಅಧಿಕೃತವಾಗಿ ವ್ಯವಹಾರ ಸ್ಥಗಿತಗೊಳಿಸಿದ್ದ (Closed) ಗನ್ ಶಾಪ್ ಮಾಲೀಕ ವಿಜಯ್ ಅಂಗೋಲ್ಕರ್ ಎಂಬಾತ, ಕಾನೂನುಬಾಹಿರವಾಗಿ ಬಿಡಿಭಾಗಗಳನ್ನು ವಿಶ್ವನಾಥ್ ದೇಸಾಯಿಗೆ ಮಾರುತ್ತಿದ್ದ. ದೇಸಾಯಿ ಅದನ್ನು ಮುಖ್ಯ ಆರೋಪಿ ಮಾರುತಿ ಸುತಾರ್‌ಗೆ ತಲುಪಿಸುತ್ತಿದ್ದ. ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕಂಪ್ಲೀಟ್ ಎಫ್‌ಐಆರ್ ದಾಖಲಾಗಿದ್ದು, ರಾಜ್ಯದ ಇನ್ನು ಎಲ್ಲೆಲ್ಲಿ ಈ ಮಾರಕಾಸ್ತ್ರಗಳು ಸಪ್ಲೈ ಆಗಿವೆ ಎಂಬ ತೀವ್ರ ವಿಚಾರಣೆ ನಡೆಯುತ್ತಿದೆ.

You may also like