Home » ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆ ಬಿದ್ದ ತಾಯಿ-ಮಗು, ಕೂಡಲೇ ತಮ್ಮ ಬಸ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಚಾಲಕ, ನಿರ್ವಾಹಕ

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆ ಬಿದ್ದ ತಾಯಿ-ಮಗು, ಕೂಡಲೇ ತಮ್ಮ ಬಸ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಚಾಲಕ, ನಿರ್ವಾಹಕ

0 comments

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದ ತಾಯಿ ಮತ್ತು ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್‌ ಚಾಲಕ ಮತ್ತು ನಿರ್ವಾಹಕ, ಸಾರ್ವಜನಿಕ ಪ್ರಯಾಣಿಕರನ್ನು ಕೆಳಗಿಳಿಸಿ ನಂತರ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆಯನ್ನು ಮರೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶುಕ್ರವಾರ ಮಂಗಳೂರಿನ ಕಾವೂರು ಕಡೆಯಿಂದ ಕುಂಜತ್ತಬೈಲ್‌ ಕಡೆಗೆ ಬರುತ್ತಿದ್ದ ರೂಟ್‌ ನಂಬರ್‌ 13B ಯ ಮಾಸ್ಟರ್‌ ಎಂಬ ಹೆಸರಿನ ಸಿಟಿ ಬಸ್‌ ಮರಕಡ ಜಂಕ್ಷನ್‌ ತಲುಪುತ್ತಿತ್ತು. ಇದೇ ಸಂದರ್ಭ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ಸಿನಿಂದ ತಾಯಿ ಮತ್ತು ಆಕೆಯ ಪುಟ್ಟ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಬಿದ್ದ ರಭಸಕ್ಕೆ ಮಗು ಪ್ರಜ್ಞೆ ತಪ್ಪಿದ್ದು, ಇದನ್ನು ನೋಡಿ ಅಲ್ಲಿದ್ದವರು ನಿಜಕ್ಕೂ ಆತಂಕಕ್ಕೆ ಒಳಗಾಗಿದ್ದರು.

ಈ ಭೀಕರ ದೃಶ್ಯವನ್ನು ಗಮನಿಸಿದ ಮಾಸ್ಟರ್‌ ಬಸ್‌ನ ಚಾಲಕ ದಯಾನಂದ ಮತ್ತು ನಿರ್ವಾಹಕ ಸಂದೀಪ್‌ ಅವರು ಕೂಡಲೇ ಸಮಯ ಪ್ರಜ್ಞೆ ಮೆರೆದಿದ್ದು, ತಮ್ಮ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಗಾಯಾಳುಗಳ ಬಳಿಗೆ ಧಾವಿಸಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆಂಬ್ಯುಲೆನ್ಸ್‌ಗೆ ಕಾಯದೆ, ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕೆಳಗೆ ಇಳಿಯಲು ವಿನಂತಿ ಮಾಡಿದ್ದಾರೆ. ನಂತರ ಕೂಡಲೇ ಅವರಿಬ್ಬರನ್ನು ಅದೇ ಸಿಟಿ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.

ಬಸ್ಸಿನ ಚಾಲಕ, ನಿರ್ವಾಹನ ಸಕಾಲದಲ್ಲಿ ಸ್ಪಂದನೆ ಮಾಡಿ ಜೀವ ಉಳಿಸಿದ್ದು, ಅವರ ನಿಸ್ವಾರ್ಥ ಸೇವೆಗೆ ಮಂಗಳೂರಿನ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

banner

You may also like