ಅತ್ತೆ ಸಾವನ್ನಪ್ಪಿರುವ ಸುದ್ದಿ ತಿಳಿದು ಅಳಿಯ ಊರಿಗೆ ತೆರಳಿದ್ದ. ಆತನೇ ಅತ್ತೆಯ ಕಾರ್ಯ ಮಾಡಬೇಕಿತ್ತು. ಸರಯು ನದಿ ತಟದಲ್ಲಿನ ಚಿತಾ ಘಾಟ್ನಲ್ಲಿ ಶಬಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಹೀಗಾಗಿ ಅತ್ತೆಯ ಚಿತೆಗೆ ಬೆಂಕಿ ಇಡಲು ಸಂಪ್ರದಾಯದಂತೆ ನೀರಿನಲ್ಲಿ ಮುಳುಗಿ ಒದ್ದೆ ಬಟ್ಟೆಯಲ್ಲಿ ಬರಬೇಕಿತ್ತು. ಆದ್ದರಿಂದ ನದಿಯಲ್ಲಿ ಮುಳುಗೆದ್ದು ಬರಲು ಹೋದವನನ್ನು ಮೊಸಳೆ ಒಂದು ಎಳೆದು ತಿಂದ ಆಘಾತಕಾರಿ ಘಟನೆ ನಡೆದಿದೆ.


ಗ್ರೇಟರ್ ನೋಯ್ಡಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಶರ್ಮಾ ಪತ್ನಿ ರೇಖಾ ಹಾಗೂ ನಾಲ್ಕು ವರ್ಷಗ ಮಗಳು ನಿಕ್ಕಿ ಜೊತೆ ವಾಸವಾಗಿದ್ದರು. ಪತ್ನಿ ರೇಖಾ ಖಾಯಿ ನಿಧನ ಸುದ್ದಿ ತಿಳಿದು ಕುಟುಂಬ ಸಮೇತ ಪತ್ನಿ ಊರಿಗೆ ತೆರಳಿದ್ದರು. ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಆಗಮಿಸಿದ ದೀಪಕ್ ಶರ್ಮಾ ಹಾಗೂ ಕುಟುಂಬ, ಅತ್ತೆಯ ಅಂತಿಮ ವಿಧಿವಿಧಾನದಲ್ಲಿ ತೊಡಗಿದ್ದರು. ಉಮ್ರಿ ಗ್ರಾಮದಲ್ಲಿ ಹರಿಯುವ ಸರಯು ನದಿಯ ಚಿತಾ ಘಾಟ್ನಲ್ಲಿ ಅಂತಿಮ ವಿಧಿವಿಧಾನ ಪೂರೈಸಿ ಅಗ್ನಿಸ್ಪರ್ಶ ಮಾಡಲು ಎಲ್ಲಾ ತಯಾರಿ ಮಾಡಲಾಗಿತ್ತು. ಸಂಪ್ರದಾಯದಂತೆ ಒದ್ದೆ ಬಟ್ಟೆಯಲ್ಲಿ ಬಂದು ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿತ್ತು. ಹೀಗಾಗಿ ಸರಯು ನದಿ ದಂಡೆಯ ಮೆಟ್ಟಿಲುಗಳಲ್ಲಿ ಇಳಿದು ಸ್ನಾನ ಮಾಡಿ ಬರಲು ದೀಪಕ್ ಶರ್ಮಾ ನದಿಗೆ ಇಳಿದಿದ್ದಾನೆ.
ದೀಪಕ್ ಶರ್ಮಾ ನೀರಿನಲ್ಲಿ ಮುಳುಗಲು ಹೋದಾಗ ಕೆಲವರು ಪಕ್ಕದಲ್ಲೇ ನೀರ ಬಳಿ ನಿಂತಿದ್ದರು. ದೀಪಕ್ ಶರ್ಮಾ ಒಂದೆರೆಡು ಹೆಜ್ಜೆ ಮುಂದೆ ತೆರಳಿ ನೀರಿನಲ್ಲಿ ಮುಳುಗವ ಪ್ರಯತ್ನ ಮಾಡಿದ್ದಾರೆ. ಇನ್ನೇನು ದೀಪಕ್ ಶರ್ಮಾ ನೀರಿನಲ್ಲಿ ಮುಳುಗಬೇಕು ಅನ್ನುವಷ್ಟರಲ್ಲೇ ದೈತ್ಯ ಮೊಸಳೆಯೊಂದು ದಾಳಿ ದೀಪಕ್ ಶರ್ಮಾನನ್ನು ಹಿಡಿದು ನೀರ ಮಧ್ಯಕ್ಕೆ ಎಳೆದೊಯ್ದಿದೆ. ಕುಟುಂಬಸ್ಥರು ಚೀರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತ ದೀಪಕ್ ಶರ್ಮಾ ಮೊಸಳೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಕೆಲವೇ ನಿಮಿಷಗಳಲ್ಲಿ ಮೊಸಳೆ ದೀಪಕ್ ಶರ್ಮಾನನ್ನು ತಿಂದು ಹಾಕಿದೆ.
ಚೀರಾಟದಿಂದ ಅಲ್ಲೇ ಇದ್ದ ಬೋಟ್ ಮೂಲಕ ಗ್ರಾಮಸ್ಥರು ನದಿಯಲ್ಲಿ ಒಂದಷ್ಟು ದೂರ ತೆರಳಿದ್ದಾರೆ. ಆದರೆ ಭಾರಿ ಸಂಖ್ಯೆಯಲ್ಲಿ ಮೊಸಳೆ ಇದ್ದ ಕಾರಣ ಏನು ಮಾಡಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಲೇ ಎಲ್ಲರ ಮುಂದೆ ದೀಪಕ್ ಶರ್ಮಾನನ್ನ ಮೊಸಳೆ ತಿಂದು ಹಾಕಿದೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

