ರಸ್ತೆಗಳಿರುವುದು ಜನರ ಓಡಾಟಕ್ಕೇ ಹೊರತು ನಮಾಜ್ಗಲ್ಲ. ಅಂತಹ ಪ್ರಾರ್ಥನೆಗಳನ್ನು ನಿಗದಿತ ಪ್ರಾರ್ಥನಾ ಸ್ಥಳಗಳಲ್ಲಿ ಪಾಳಿಗಳಲ್ಲಿ ಮಾಡಿ. ಸಾಧ್ಯವಾಗದೇ ಇದ್ದಲ್ಲಿ ಜನಸಂಖ್ಯೆ ನಿಯಂತ್ರಿಸಿ’ ಎಂದು ಸಿಎಂ ಯೋಗಿ ಆದಿತ್ಯನಾಥ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ, ‘ನಮಾಜ್ ಅಥವಾ ಇನ್ಯಾವುದೇ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಷ್ಟಕ್ಕೂ ರಸ್ತೆಗಳಿರುವುದು ಓಡಾಡುವುದಕ್ಕಾಗಿಯೇ ಹೊರತು ಇಂತಹ ತಮಾಷೆಗೆ (ದೃಶ್ಯಗಳಿಗೆ) ಅಲ್ಲ. ರಸ್ತೆಯನ್ನು ನಿರ್ಬಂಧಿಸಲು ಯಾರಿಗಾದರೂ ಯಾವ ಹಕ್ಕಿದೆ? ಅವರು ತಮಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹೋಗಿ ಪ್ರಾರ್ಥನೆ ಸಲ್ಲಿಸಲಿ’ ಎಂದರು.
ಇಷ್ಟೇ ಅಲ್ಲದೆ ಜತೆಗೆ ‘ನಿಮ್ಮ ಮನೆಯಲ್ಲಿ ಎಲ್ಲರಿಗೂ ನೀವು ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿಲ್ಲ ಎಂದಾದಲ್ಲಿ ನೀವು ಸಂಖ್ಯೆ (ಜನಸಂಖ್ಯೆ) ಕಡಿತ ಮಾಡಬೇಕು. ಅಲ್ಲದೆ, ನೀವು ಈ ವ್ಯವಸ್ಥೆಯಲ್ಲಿ ಬದುಕಬೇಕಂತಿದ್ದರೆ ಇಲ್ಲಿನ ನಿಯಮ ಮತ್ತು ಕಾನೂನುಗಳನ್ನು ಪಾಲಿಸಬೇಕು. ಇಲ್ಲಿ ಕಾನೂನು ಪಾಲನೆ ಆಗಲೇಬೇಕು. ನಿಮಗೆ ನಮಾಜ್ ಮಾಡುವುದು ಅತ್ಯಗತ್ಯವಾಗಿದ್ದರೆ, ಪಾಳಿಗಳಲ್ಲಿ ಮಾಡಿ. ನೀವು ಪ್ರಾರ್ಥನೆ ಮಾಡುವುದನ್ನು ನಾವು ತಡೆಯುವುದಿಲ್ಲ. ಆದರೆ ಬೀದಿಗಳಲ್ಲಿ ಮಾಡುವುದಕ್ಕೆ ಅವಕಾಶ ಕೊಡಲ್ಲ. ಬೀದಿಗಳಲ್ಲಿ ಅರಾಜಕತೆಗೆ ನಾವು ಅವಕಾಶ ಕೊಡಲ್ಲ. ಶಾಂತಿಯುತವಾಗಿ ಇದನ್ನು ಪಾಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ‘ ಎಂದು ಎಚ್ಚರಿಸಿದರು.
