ಕಲ್ಲಂಗಡಿ ಹಣ್ಣನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಇಂಥದ್ದೇ ಘಟನೆ ನಡೆದಿದೆ. ಕಲ್ಲಂಗಡಿ ಹಣ್ಣು ತಿಂದ 8 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದು , ಮೂವರ ಸ್ಥಿತಿ ಗಂಭೀರವಾಗಿದೆ.


ಮೃತರನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧೀವರ್ (15) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಉಳಿದ ಮೂವರು ಮಕ್ಕಳಾದ ಶ್ರೀ ಧೀವರ್ (4), ಪಿಂಟು ಧೀವರ್ (12) ಮತ್ತು ಹಿತೇಶ್ ಧೀವರ್ (13) ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮಕ್ಕಳು ತಮ್ಮ ಸೋದರಮಾವನ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಭಾನುವಾರ ಬೆಳಿಗ್ಗೆ ಕತ್ತರಿಸಿಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಧ್ಯಾಹ್ನದ ವೇಳೆಗೆ ಸೇವಿಸಿದ್ದರು. ನಂತರ ರಾತ್ರಿ ಮದುವೆ ಮನೆಯಲ್ಲಿ ತಯಾರಿಸಲಾಗಿದ್ದ ಚಿಕನ್ ಊಟ ಮಾಡಿದ್ದರು. ಅಲ್ಪ ಸಮಯದ ನಂತರ ಎಲ್ಲರಿಗೂ ಹೊಟ್ಟೆ ನೋವು, ವಾಂತಿ ಮತ್ತು ದೌರ್ಬಲ್ಯ ಕಾಣಿಸಿಕೊಂಡಿದೆ.
ಏನಿರಬಹುದು ಕಾರಣ?
ಬ್ಯಾಕ್ಟೀರಿಯಾ ಸೋಂಕು: ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ದೀರ್ಘಕಾಲ ತೆರೆದಿಟ್ಟಾಗ ಅದರಲ್ಲಿ ಬ್ಯಾಕ್ಟೀರಿಯಾಗಳು (Salmonella ಅಥವಾ Listeria) ವೇಗವಾಗಿ ಬೆಳೆಯುತ್ತವೆ. ಇದು ತೀವ್ರ ಸ್ವರೂಪದ ಫುಡ್ ಪಾಯಿಸನಿಂಗ್ಗೆ ಕಾರಣವಾಗುತ್ತದೆ.
ರಾಸಾಯನಿಕಗಳ ಬಳಕೆ: ಹಣ್ಣುಗಳು ಬೇಗ ಹಣ್ಣಾಗಲು ಅಥವಾ ಕೆಂಪು ಬಣ್ಣ ಬರಲು ಬಳಸುವ ‘ಎರಿಥ್ರೋಸಿನ್’ (Erythrosine) ನಂತಹ ಅಪಾಯಕಾರಿ ಬಣ್ಣಗಳು ಅಥವಾ ರಾಸಾಯನಿಕಗಳು ವಿಷಾಹಾರಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ.

