ಪೊಲೀಸ್ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಹಾಸ್ಟೆಲ್ನಲ್ಲಿ ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿದ್ದಾಳೆ. ಈಕೆಯ ಸಾವಿಗೆ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಬೆಳಗಾವಿಯ ನಗರದ ಅಜಂ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ ನಾಯಕ (21) ಎಂದು ಗುರುತಿಸಲಾಗಿದೆ.
ಕಾವೇರಿ ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೇವಲ ಮೂರು ತಿಂಗಳ ಹಿಂದಷ್ಟೇ ಕಾವೇರಿಗೆ ಎಂಗೆಜ್ಮೆಂಟ್ (ನಿಶ್ಚಿತಾರ್ಥ) ಮಾಡಲಾಗಿತ್ತು. ಪೊಲೀಸ್ ಪೇದೆಯೊಬ್ಬರ ಜೊತೆಗೆ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳಲ್ಲಿ ಸಂಭ್ರಮದ ವಾತಾವರಣವಿತ್ತು. ಶಿಕ್ಷಣ ಮುಗಿದ ನಂತರ ಮದುವೆ ಮಾಡಿಕೊಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಮದುವೆಯ ಕನಸು ಕಾಣಬೇಕಿದ್ದ ಯುವತಿ ಮಸಣ ಸೇರಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.
ವಿದ್ಯಾರ್ಥಿನಿಯ ಆತ್ಮ*ಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

