Shivamogga : ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ತರಬೇತಿ ನಿರತ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ ಮಂಗಳವಾರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ.


ಈ ನೀರಾನೆಗೆ 12 ವರ್ಷವಾಗಿದ್ದು, ಶಿವಮೊಗ್ಗ ಮೃಗಾಲಯದಲ್ಲಿತ್ತು. ಈಚೆಗೆ ಚಿಕಿತ್ಸೆ ನೀಡಲು ಹೋಗಿದ್ದ ಡಾ.ಸಮೀಕ್ಷಾ ರೆಡ್ಡಿ ಸಾವಿಗೂ ಈ ನೀರಾನೆ ಕಾರಣವಾಗಿತ್ತು. ಇದು ಗರ್ಭ ಧರಿಸಿ ಮಾರ್ಚ್ಗೆ ಎಂಟು ತಿಂಗಳು ಕಳೆದಿದ್ದರೂ ಪ್ರಸವದ ಲಕ್ಷಣಗಳು ಕಂಡುಬಂದಿರಲಿಲ್ಲ. ಭ್ರೂಣ ಗರ್ಭದಲ್ಲೇ ಮೃತಪಟ್ಟಿತ್ತು. ಈಚೆಗೆ ಆಹಾರ ಸೇವನೆ ಕಡಿಮೆ ಮಾಡಿ ಮಂದವಾಗಿತ್ತು. ಏಪ್ರಿಲ್ 10ರಿಂದ ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡ ನಿಗಾ ವಹಿಸಿ ಅದರ ಆರೋಗ್ಯ ತಪಾಸಣೆಯಲ್ಲಿ ತೊಡಗಿತ್ತು ಎಂದು ಹುಲಿ ಸಿಂಹಧಾಮದ ಸಿಇಒ ಕೆ.ವಿ.ಅಮರಾಕ್ಷರ ತಿಳಿಸಿದ್ದಾರೆ.
ಇನ್ನೂ ಸಮೀಕ್ಷಾ ಮೇಲೆ ದಾಳಿ ಮಾಡುವ 3 ದಿನ ಮೊದಲೇ ಆಹಾರ ತ್ಯಜಿಸಿದ್ದ ನೀರಾನೆ, ಕಳೆದ 20 ದಿನದಿಂದಲೂ ಆಹಾರ ತಿಂದಿರಲಿಲ್ಲ. ಮರಿ ಮೃತಪಟ್ಟಿದ್ದರಿಂದ ಗರ್ಭಾಶಯದಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಈ ಸೋಂಕು ಇರುವುದು ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ನೀರಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
