Hubballi: ಜೊತೆಯಲ್ಲಿ ಸುಂದರವಾದ ಹಾಗೂ ನಿಯತ್ತಿನ ಹೆಂಡತಿ ಇದ್ದರೂ ಕೂಡ ಇಲ್ಲೊಬ್ಬ ಶಿಕ್ಷಕ ತನ್ನ ಆ ಹೆಂಡತಿಗೆ ರಾತ್ರಿ ಹೊತ್ತು ನಿದ್ರೆ ಮಾತ್ರೆ ಹಾಕಿ ಮಲಗಿಸಿ ಮನೆಗೆ ಮತ್ತೊಬ್ಬ ಸ್ತ್ರೀಯನ್ನು ಕರೆತರುತ್ತಿದ್ದ ಪ್ರಕನರಣ ಬೆಳಕಿಗೆ ಬಂದಿದೆ.


ಹುಬ್ಬಳ್ಳಿಯ ವಿಜಯನಗರ ನಿವಾಸಿ ಕಾಂಚನ ಎಂಬುವವರೇ ಪತಿಯಿಂದ ವಂಚನೆಗೊಳಗಾದ ದುರ್ದೈವಿ. ಬಿಜಾಪುರದವರಾದ ಮಾಲಿಂಗಪ್ಪ ರ್ಯಾಗಿ ಎಂಬುವವರ ಜೊತೆ ಕಾಂಚನ ಅವರ ವಿವಾಹ 2016ರಲ್ಲಿ ನಡೆದಿತ್ತು. ಈ ದಂಪತಿಗೆ ಮೂರು ವರ್ಷದ ಪುಟ್ಟ ಮಗುವೂ ಇದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಮಾಲಿಂಗಪ್ಪ, ಕೆಲವು ವರ್ಷಗಳಿಂದ ಈತ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ. ಪತಿಯ ವಾಟ್ಸಪ್ ಸಂದೇಶಗಳನ್ನು ಆಕಸ್ಮಿಕವಾಗಿ ಗಮನಿಸಿದ ಕಾಂಚನ ಅವರಿಗೆ ಪತಿಯ ಅಕ್ರಮ ಸಂಬಂಧದ ವಿಷಯ ತಿಳಿದು ದಂಗಾಗಿದ್ದರು.
ಈ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ ಕಾಂಚನ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪತಿ ಮಾಲಿಂಗಪ್ಪ ಪ್ರತಿನಿತ್ಯ ಪತ್ನಿಗೆ ನಿದ್ರೆ ಮಾತ್ರೆ ನೀಡಿ, ಆಕೆ ಗಾಢ ನಿದ್ರೆಗೆ ಜಾರಿದ ನಂತರ ಪರಸ್ತ್ರೀಯನ್ನು ಮನೆಗೆ ಕರೆತರುತ್ತಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪತಿಯ ಈ ನಡೆ ಹಾಗೂ ಸತತ ಕಿರುಕುಳದಿಂದ ಬೇಸತ್ತ ಕಾಂಚನ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಪತಿ ಮಾತ್ರ ತನ್ನ ಹಾದಿ ಬದಲಿಸಲಿಲ್ಲ. ಬದಲಾಗಿ ಈಗ ಹೆಂಡತಿಯೇ ಬೇಡ ಎಂದು ಆಕೆಯನ್ನು ತವರು ಮನೆಗೆ ಬಿಟ್ಟು ಹೋಗಿದ್ದಾನೆ. ಇದರಿಂದ ನೊಂದ ಕಾಂಚನ ಅವರು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
