ಬೆಂಗಳೂರು ಮಾ.24: ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಬಾಕಿ ಇದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ಆಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದ ಮೃತಪಟ್ಟ 11 ಅಭಿಮಾನಿಗಳಿಗೆ ಟ್ರಿಬ್ಯೂಟ್ ನೀಡಲು ಆರ್ಸಿಬಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.

ಆರ್ಸಿಬಿ ಆಟಗಾರರು ಇದಕ್ಕಾಗಿ ಅಭ್ಯಾಸದ ಸಮಯದಲ್ಲಿ 11 ನಂಬರ್ ಜರ್ಸಿ ಧರಿಸಿ ಪ್ರ್ಯಾಕ್ಟೀಸ್ ಮಾಡಲಿದ್ದಾರೆ. ಇಷ್ಟೇ ಅಲ್ಲ ಮೃತಪಟ್ಟ 11 ಅಭಿಮಾನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ರಿಸರ್ವ್ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲಿ ಮೃತ 11 ಅಭಿಮಾನಿಗಳಿಗಾಗಿ 11 ಸೀಟುಗಳನ್ನು ರಿಸರ್ವ್ ಮಾಡಲಿದೆ. ಈ ರೀತಿಯಾಗಿ ತನ್ನ ಗೌರವ ಸಮರ್ಪಣೆಯನ್ನು ಆರ್ಸಿಬಿ ಮಾಡಲಿದೆ. ಪ್ರತಿ ಮ್ಯಾಚ್ಗೂ 11 ಸೀಟ್ಗಳ ಟಿಕೆಟ್ ಮಾರಾಟ ಮಾಡುವುದಿಲ್ಲ. ಅಲ್ಲದೇ ಅಂತರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಕೂಡಾ 11 ಸೀಟ್ಗಳು ಮೃತರ ಹೆಸರಿನಲ್ಲಿ ಮೀಡಲಿಡುವುದಾಗಿ ಕೆಎಸ್ಸಿಎ ಘೋಷಣೆ ಮಾಡಿದೆ.
ಮುಖ್ಯ ದ್ವಾರದ ಭಾಗದಲ್ಲಿ ಹೆಸರುಗಳನ್ನು ಕೆಎಸ್ಸಿಎ ಅಳವಡಿಕೆ ಮಾಡಲಿದ್ದು, ಬೋರ್ಡ್ ಅಳವಡಿಕೆ ಮಾಡಿ ಅದರಲ್ಲಿ ಮೃತರ ಹೆಸರನ್ನು ದಾಖಲು ಮಾಡಲಾಗುತ್ತದೆ.
ಆರ್ಸಿಬಿ ತನ್ನ ಎಲ್ಲಾ ಅಭ್ಯಾಸಗಳಲ್ಲಿ 11 ಜರ್ಸಿ ನಂಬರ್ನಲ್ಲಿ ಆಡಲಿದೆ. ಆರ್ಸಿಬಿಯ ಅಭ್ಯಾಸ ಪಂದ್ಯದ ಜರ್ಸಿಯಲ್ಲಿ 11 ನಂಬರ್ ದಾಖಲಿಸಲಾಗಿದೆ. ಇನ್ನು ಬಿಸಿಸಿಐ ಐಪಿಎಲ್ ಹಾಗೂ ಐಸಿಸಿ ನಿಯಮದ ಪ್ರಕಾರ ಪಂದ್ಯದಲ್ಲಿ ಒಂದೇ ನಂಬರ್ ಜರ್ಸಿಯಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ. ಹೀಗಾಗಿ ಆರ್ಸಿಬಿ ಅಭ್ಯಾಸದ ವೇಳೆ 11 ಜರ್ಸಿ ತೊಡಲಿದೆ.
ಬೆಂಗಳೂರಿ ಚಿನ್ನಸ್ವಾಮಿ ಪಂದ್ಯದಲ್ಲಿ ನಡೆಯುವ ಪಂದ್ಯದ ಟಿಕೆಟ್ ಖರೀದಿಸಿದ ಅಭಿಮಾನಿಗಳಿಗೆ ನಮ್ಮ ಮೆಟ್ರೋ ಪ್ರಯಾಣ ಉಚಿತವಾಗಿದೆ. ಟಿಕೆಟ್ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಇರಲಿದೆ. ಇದು ಮೆಟ್ರೋ ಪ್ರಯಾಣಕ್ಕೂ ಅನ್ವಯವಾಗಲಿದೆ. ಪಂದ್ಯದ ಟಿಕೆಟ್ ಇದ್ದ ಅಭಿಮಾನಿಗಳು ಉಚಿತವಾಗಿ ಮೆಟ್ರೋದಲ್ಲಿ ಪ್ರಾಯಣಿಸಬಹುದು. ಇನ್ನು ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯುವ ದಿನ ಮೆಟ್ರೋ ಅವಧಿ ವಿಸ್ತರಣೆ ಮಾಡಲಾಗುತ್ತದೆ.

