Home » ರೇಮಂಡ್ ಡಿ’ಕುನ್ಹಾ ಅವರಿಗೆ ಹುಟ್ಟೂರ ಸನ್ಮಾನ ಪುಸ್ತಕ ಬಿಡುಗಡೆ,. ಕವಿಗೋಷ್ಠಿ

ರೇಮಂಡ್ ಡಿ’ಕುನ್ಹಾ ಅವರಿಗೆ ಹುಟ್ಟೂರ ಸನ್ಮಾನ ಪುಸ್ತಕ ಬಿಡುಗಡೆ,. ಕವಿಗೋಷ್ಠಿ

0 comments

ಮೂಡುಬಿದಿರೆ: ಪತ್ರಕರ್ತ, ಸಾಹಿತಿ ರೇಮಂಡ್ ಡಿ’ಕುನ್ಹಾ ತಾಕೋಡೆ ಅವರ ೨೨ನೇ ಪುಸ್ತಕ ಬೊಳ್ಳಿಲು ಬಿಡುಗಡೆ ಹಾಗೂ ಹುಟ್ಟೂರಿನ ಸನ್ಮಾನ, ಕವಿಗೋಷ್ಠಿ ಕಾರ್ಯಕ್ರಮ ಮೂಡುಬಿದಿರೆಯ ಸಮಾಜಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ನಡೆಯಿತು.
ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು, ಇಂದಿನ ಯುವ ಪೀಳಿಗೆಗೆ ಯಾವ ವಿಚಾರದಲ್ಲೂ ಸಹನೆ, ಆಸಕ್ತಿಗಳು ಇಲ್ಲವಾಗಿದೆ. ಭಾಷೆಯ ಬಗೆಗಿನ ಪ್ರೀತಿ ಕಡಿಮೆಯಾಗುತ್ತಿದೆ. ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಯುವಕರಲ್ಲಿ ಬೆಳೆಯಬೇಕು, ಕೇಳುವ ಮನಸ್ಸು ಇರಬೇಕು ಎಂದು ಹೇಳಿದರು.
ಇಂದು ಎ.ಐ ತಂತ್ರಜ್ಞಾನದ ಆವಿಷ್ಕಾರವಾಗಿದ್ದರೂ, ಇಂತಹ ಸಾಹಿತ್ಯ ರಚನೆಗಳು ಪರಿಣಾಮಕಾರಿಯಾಗಲು ಸಾಧ್ಯವೇ ಇಲ್ಲ ಎಂದ ವಿವೇಕ್ ಆಳ್ವ, ಯುವಜನತೆ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ, ಭಾಷಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ರೇಮಂಡ್ ತಾಕೋಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತುಳುಕೂಟ ರಿ. ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ, ಪ್ರೆಸ್‌ಕ್ಲಬ್ ಮೂಡುಬಿದಿರೆ, ಜೆಸಿಐ ಮೂಡುಬಿದಿರೆ ತ್ರಿಭುವನ್, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮೂಡುಬಿದಿರೆ, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಮೂಡುಬಿದಿರೆ , ಅಭಿಮಾನಿ ಬಳಗ ತಾಕೊಡೆ, ಅಭಿಮಾನಿ ರಿಕ್ಷಾ ಚಾಲಕ ಮಾಲಕರ ಬಳಗ ಮೂಡುಬಿದಿರೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದರು.
ಜೇಸಿ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಅಧ್ಯಕ್ಷ ಹರೀಶ್ ಎಂ.ಕೆ, ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ತುಳುಕೂಟ ಅಧ್ಯಕ್ಷ ಧನಕೀರ್ತಿ ಬಲಿಪ, ಚಂದ್ರಹಾಸ ದೇವಾಡಿಗ, ರಾಜೇಶ್ ಸುವರ್ಣ, ಆಲ್ಬರ್ಟ್, ಸದಾನಂದ ನಾರಾವಿ ವೇದಿಕೆಯಲ್ಲಿದ್ದರು.

ಗೀತಾ ಲಕ್ಷ್ಮೀಶ್‌ ಶೆಟ್ಟಿ ಕೃತಿ ಪರಿಚಯ ಮಾಡಿದರು. ಸದಾನಂದ ನಾರಾವಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

You may also like