ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂಭ್ರಮದ ನಡುವೆ ಹಿಂದೂ ಸ್ನೇಹಿತೆಯರ ಜೊತೆ ಜಾತ್ರೆ ನೋಡಲೆಂದು ಬಂದಿದ್ದ 17 ವರ್ಷದ ಮುಸ್ಲಿಂ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಹಲ್ಲೆ ಮಾಡಿ, ಅಪಹರಣ ಮಾಡಿರುವ ಕುರಿತು ದೂರು ದಾಖಲಾಗಿದೆ.

ಮಾರ್ಚ್ 18 ರಂದು ಸಂಜೆ ಉಜಿರೆ ಜಾತ್ರಾ ಮೈದಾನದಲ್ಲಿ ಈ ಘಟನೆ ನಡೆದಿದೆ.
ಜಾತ್ರೆ ನೋಡುತ್ತಿದ್ದ ಬಾಲಕನ ಬಳಿ ಯುವಕರ ಗುಂಪೊಂದು ಬಂದು, ಹಿಂದೂ ಹುಡುಗಿಯರನ್ನು ಲಾಡ್ಜ್ಗೆ ಕರೆದೊಯ್ಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ನಂತರ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳು, ಮೊಬೈಲ್ನಲ್ಲಿ ಬಲವಂತದಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಸಿದ್ದಾರೆ ಎನ್ನಲಾಗಿದೆ.
17 ವರ್ಷದ ಬಾಲಕ ನೀಡಿದ ದೂರಿನ ಅನುಸಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಎಸ್ಪಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. 17 ವರ್ಷದ ಬಾಲಕ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341 (ಅಕ್ರಮ ತಡೆ), 323 (ಹಲ್ಲೆ), 363 (ಅಪಹರಣ), 504 (ನಿಂದನೆ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ವಿಶೇಷ ತಂಡವನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

