

35 ಮಕ್ಕಳು ಬ್ಲೇಡ್ ಬಳಸಿ ತಮ್ಮ ಕೈಯನ್ನು ತಾವೇ ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. 6ರಿಂದ 8 ನೇ ತರಗತಿ ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡು ಒಂದು ತಿಂಗಳಿನಿಂದ ಹೀಗೆ ಮಾಡುತ್ತಿದ್ದು, ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 14 ಹುಡುಗಿಯರು ಸೇರಿದಂತೆ 35 ವಿದ್ಯಾರ್ಥಿಗಳ ಮಣಿಕಟ್ಟಿನ ಮೇಲೆ ಗಾಯಗಳಾಗಿದ್ದು, ಪೋಷಕರು ಮತ್ತು ಶಿಕ್ಷಕರನ್ನು ಆತಂಕಕ್ಕೆ ದೂಡಲಾಗಿದೆ. ಐದು ತಿಂಗಳ ಅವಧಿಯಲ್ಲಿ ನಡೆದ ಈ ವಿಚಿತ್ರ ಘಟನೆ ಕುರುದ್ ಬ್ಲಾಕ್ನ ದಹದಹಾ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವರದಿಯಾಗಿದೆ.
ಎಲ್ಲರೂ ಮಣಿಕಟ್ಟಿನ ಮೇಲೆ ಗಾಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿಯ ಪೋಷಕರು ಒಂದು ವಾರದ ಹಿಂದೆ ಶಾಲೆಯ ಪ್ರಾಂಶುಪಾಲ ಪುನೀತ್ ರಾಮ್ ಸಾಹು ಅವರಿಗೆ ವರದಿ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯೊಬ್ಬನ ಮಣಿಕಟ್ಟಿನಲ್ಲಿ ಗಾಯದ ಗುರುತನ್ನು ಗಮನಿಸಿದ ಪೋಷಕರು ಫೆಬ್ರವರಿ 13 ರಂದು ಶಾಲೆಯ ಪ್ರಾಂಶುಪಾಲರಿಗೆ ವರದಿ ಮಾಡಿದ್ದಾರೆ, ಇದು ಘಟನೆಯನ್ನು ಬೆಳಕಿಗೆ ತಂದಿದೆ ಎಂದು ಧಮ್ತಾರಿ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ (ಡಿಎಸ್ಪಿ) ರಾಗಿಣಿ ಮಿಶ್ರಾ ತಿಳಿಸಿದ್ದಾರೆ.
ಸ್ಥಳೀಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM), ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDOP), ಬ್ಲಾಕ್ ಶಿಕ್ಷಣ ಅಧಿಕಾರಿ ಮತ್ತು ವೈದ್ಯಕೀಯ ಅಧಿಕಾರಿಗಳ ತಂಡವನ್ನು ಒಳಗೊಂಡ ಜಂಟಿ ತಂಡವು ಈ ವಿಷಯದ ತನಿಖೆಗಾಗಿ ಶಾಲೆಗೆ ಭೇಟಿ ನೀಡಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ತನಿಖಾ ತಂಡವು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಆಗ ವಿದ್ಯಾರ್ಥಿಗಳು ತಮಾಷೆಯಾಗಿ ಮಾಡಿದ ‘ಸಹವರ್ತಿ ಅನುಕರಣೆ’ಯ ಪ್ರಕರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದರು.
ತನಿಖೆಯಲ್ಲಿ ಈ ವಿದ್ಯಾರ್ಥಿಗಳಲ್ಲಿ ಯಾವುದೇ ಮಾನಸಿಕ ಅಸ್ವಸ್ಥತೆ, ಆನ್ಲೈನ್ ಆಟದ ವ್ಯಸನ ಅಥವಾ ಮಾದಕ ದ್ರವ್ಯ ದುರುಪಯೋಗದ ಪ್ರಕರಣ ಕಂಡುಬಂದಿಲ್ಲ ಎಂದು ಅವರು ಹೇಳಿದರು.
