

ಮೈಸೂರು: ಪ್ರವಾಸಕ್ಕೆ ಹೋಗಲು ಗಂಡ ಅನುಮತಿ ನಿರಾಕರಿಸಿದ ಕಾರಣ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆದರೆ ಗೃಹಿಣಿ ಸಂಬಂಧಿಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.
ನಗರದ ಸರಸ್ವತಿಪುರಂನ ನಿವಾಸಿ 46 ವರ್ಷದ ಸಂಧ್ಯಾ ಮೃತ ಮಹಿಳೆ.
ಮನೆಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಬೆಂಗಳೂರು ಮೂಲದ ಸಂಧ್ಯಾ ಅವರನ್ನು 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಎನ್ನುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ವಿದೇಶದಲ್ಲಿ ಓದುತ್ತಿದ್ದಾರೆ. ಗಂಡ ಮಗನ ಜೊತೆ ಸಂಧ್ಯಾ ವಾಸವಿದ್ದರು.
ನಿನ್ನೆ ರಾತ್ರಿ ಪ್ರವಾಸಕ್ಕೆ ಹೋಗುವ ವಿಷಯದಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗಿದ್ದು, ಗಂಡ ಮನೆಯಿಂದ ಹೊರ ಹೋದ ನಂತರ ಫ್ಯಾನ್ಗೆ ನೇಣು ಹಾಕಿದ್ದಾರೆ. ಆದರೆ ತನ್ನ ಅಕ್ಕನ ಸಾವಿಗೆ ಅನುಮಾನ ವ್ಯಕ್ತಪಡಿಸಿ ಸಹೋದರ ಗುರುಮೂರ್ತಿ ಅವರು ಗಂಡ, ಮಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
