

ಬೆಳ್ತಂಗಡಿ: ಹಸುಳೆ ಮಗುವಿನ ಸಹಿತ ಎರಡು ಮಕ್ಕಳ ಜತೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ದಂಪತಿಗಳ ಕಷ್ಟ ಗಮನಿಸಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅಕ್ಷರಶ: ಮೂಕರಾದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲದ ನಿವಾಸಿ ಷಣ್ಮುಖ ಗೌಡ ಇವರ ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.
ತೀರ ಇತ್ತೀಚೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಅವರ ಎರಡೂ ಕಿಡ್ನಿಗಳು ಏಕಾಏಕಿಯಾಗಿ ಘಾಸಿಗೊಂಡಿವೆ. ಮನೆಯಲ್ಲಿ ಎರಡು ಚಿಕ್ಕ ಮಕ್ಕಳು ಇದ್ದು, ಒಂದು ಮಗು ಇನ್ನೂ ಹಸುಳೆ. ಸಣ್ಣ ಮಗುವಿನ ಜತೆ, ಮಗುವಿನ ತಾಯಿ ಪಡುತ್ತಿರುವ ನೋವನ್ನು ಗಮನಿಸಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಮುಖರಾಗಿದ್ದಾರೆ.
ಕಳೆದ ಭಾನುವಾರ ಈ ದಂಪತಿ, ಸಣ್ಣ ಮಕ್ಕಳ ಸಮೇತ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ.ಪುಷ್ಪಗಿರಿಯವರ ಭೇಟಿಯಾಗಲು ಬೆಳಂಬೆಳಿಗ್ಗೆ ಗುರುವಾಯನಕೆರೆ ಗೇರುಕಟ್ಟೆ ಸಮೀಪದ ಪುಷ್ಪಗಿರಿ ನಿವಾಸಕ್ಕೆ ಬಂದಿತ್ತು. ಸುಮಾರು 55 ಕಿಲೋಮೀಟರ್ ದೂರದಿಂದ ಬಾಡಿಗೆ ರಿಕ್ಷಾ ಹಿಡಿದು ಬಂದಿದ್ದ ದಂಪತಿಯ ನೋವಿಗೆ ಕಿರಣ್ ಚಂದ್ರ ಕಣ್ಣೀರಾಗಿದ್ದಾರೆ. ತಕ್ಷಣ ಅವರಿಗೆ ಧೈರ್ಯ ತುಂಬಿ, ಸಹಾಯಕ್ಕೆ ಧಾವಿಸಿದ್ದು, ಆರ್ಥಿಕ ಸಹಾಯ ನೀಡಿದ್ದಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಚಿಕಿತ್ಸೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಲು ತಮ್ಮ ತಂಡಕ್ಕೆ ಸೂಚಿಸಿದ್ದಾರೆ.