

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕ ಆಗಿ ಗುರುತಿಸಿಕೊಂಡಿರುವ ಮಣಿಯನ್ಪಿಳ್ಳರಾಜು ಅವರು ವಿರುದ್ಧ ಹಿಟ್ ಆಂಡ್ ರನ್ ಕೇಸು ದಾಖಲಾಗಿದೆ. ಇವರು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಡಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಿದ್ದ ಇಬ್ಬರು ಯುವಕರು ಗಂಭಿರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಫೆ.5 ರಂದು ಗುರುವಾರ ರಾತ್ರಿ ತಿರುವನಂತಪುರದಲ್ಲಿ ನಡೆದಿದೆ.
ಫೆ.5 ರಂದು ತಿರುವನಂತಪುರದ ವಝತಕಾಡ್ನಲ್ಲಿರುವ ʼತ್ರಿವೇಂಡ್ರಮ್ ಕ್ಲಬ್ʼ ಬಳಿ ರಾತ್ರಿ 9.30 ರ ಸುಮಾರಿಗೆ ಈ ಅಪಘಾತ ನಡೆದಿದೆ. ಮಣಿಯನ್ಪಿಳ್ಳ ರಾಜು ಅವರು ಚಲಾಯಿಸುತ್ತಿದ್ದ ಕಾರು ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಹೋಗುತ್ತಿದ್ದ ಸವಾರರಾದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎನ್ನುವ ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಯುವಕರು ರಸ್ತೆಗೆ ಬಿದ್ದಿದು, ಒಬ್ಬನ ಕಾಲಿನ ಮೂಳೆ ಮುರಿತ, ಇನ್ನೊಬ್ಬನಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯವಾಗಿದೆ.
ನಟ ರಾಜು ಅವರು ಅಪಘಾತ ಆದ ಕೂಡಲೇ ಗಾಯಾಳುಗಳಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದರು. ಅಪಘಾತ ಸಂಭವಿಸಿದಾಗ ಕಾರಿನ ನಂಬರ್ ಪ್ಲೇಟ್ ಸ್ಥಳದಲ್ಲಿ ಬಿದ್ದಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಆರಂಭ ಮಾಡಿದ್ದರು. ಪ್ರಾಥಮಿಕವಾಗಿ ರಾಜು ತಲೆಮರೆಸಿಕೊಂಡಿದ್ದು, ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾದರು. ಇವರನ್ನು ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಅತಿಯಾದ ವೇಗದ ಚಲಾವಣೆ, ಅಜಾಗರೂಕವಾಗಿ ಓಡಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ನಟ ಕಾರು ಚಲಾಯಿಸುವ ಸಂದರ್ಭದಲ್ಲಿ ಮದ್ಯ ಸೇವಿಸಿದ್ದು, ಖಚಿತವಾಗಿದ್ದಲ್ಲಿ ಹಲವು ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲು ಮಾಡಲಾಗುವುದು.
“ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ನಂತರ ನಾನು ಗಾಬರಿಗೊಂಡಿದ್ದೆ, ಆ ಕ್ಷಣದಲ್ಲಿ ಏನು ಮಾಡಬೇಕೆಂದು ತಿಳಿಯದೆ ಅಲ್ಲಿಂದ ಹೊರಟುಹೋದೆ” ಎಂದು ಪೊಲೀಸರ ಮುಂದೆ ನಟ ರಾಜು ಅವರು ಹೇಳಿಕೆ ನೀಡಿದ್ದಾರೆ.
ತಾನು ಕ್ಯಾನ್ಸರ್ನಿಂದ ಚೇತರಿಸಿಕೊಳ್ಳುತ್ತಿರುವುದು ಮತ್ತು ಚಿಕನ್ ಗುನ್ಯಾದಿಂದ ಬಳಲುತ್ತಿದ್ದೆ. ನನ್ನ ಪತ್ನಿ ಕೂಡಾ ಮನೆಯಲ್ಲಿ ಒಬ್ಬರೇ ಇದ್ದರು. ಸಹಾಯ ಮಾಡಲು ಸಾಧ್ಯವಾಗಲಿಲ್ಲ ನನಗೆ ಆ ಸಮಯದಲ್ಲಿ ಎಂದು ಹೇಳಿದ್ದಾರೆ
ನಾನು ಅಲ್ಲಿಂದ ಆ ಕ್ಷಣದಲ್ಲಿ ಹೊರಟು ಹೋದರೂ ಬೇರೊಬ್ಬರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡಿ ಎಂದು ಸೂಚಿಸಿದ್ದೆ ಎಂದು ಹೇಳಿದ್ದಾರೆ.
ಪೊಲೀಸರು ಬಿಎನ್ಎಸ್ ಮತ್ತು ಮೋಟಾರು ವಾಹನ ಕಾಯ್ದೆಯಡಿ ನಿರ್ಲಕ್ಷ್ಯದ ಚಾಲನೆ ಮತ್ತು ಅಪಘಾತದ ಕುರಿತು ಮಾಹಿತಿ ನೀಡದೆ ಪರಾರಿಯಾದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.













