

Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ ಮಾರತಹಳ್ಳಿಯ ಅಶ್ವತ್ಥನಗರದಲ್ಲಿ ಟ್ಯೂಷನ್ಗೆ ಹೋಗಲ್ವಾ ಅಂತ ಅಮ್ಮ ಬೈದರು ಎಂದು 13 ವರ್ಷದ ಬಾಲಕಿ ಮತ್ತು ಆಕೆಯ 9 ವರ್ಷದ ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಮನೆ ಬಿಟ್ಟು ಬಂದು ಇಡೀ ರಾಜ್ಯವನ್ನೇ ಸುತ್ತಿ ಸುದ್ದಿಯಾಗುತ್ತಿದ್ದಾರೆ.
ಹೌದು, ಓದಿನ ವಿಚಾರಕ್ಕೆ ಪೋಷಕರು ಬೈದಿದ್ದರಿಂದ ಮನನೊಂದ ಮಕ್ಕಳಿಬ್ಬರು, ಯಾರಿಗೂ ತಿಳಿಸದಂತೆ ಕಳೆದ ಫೆಬ್ರವರಿ 1ರ ಸಂಜೆ 3 ಗಂಟೆ ಸುಮಾರಿಗೆ ಮನೆಯಿಂದ ಕಾಲ್ಕಿತ್ತಿದ್ದಾರೆ. ಮಕ್ಕಳ ನಾಪತ್ತೆಯಿಂದ ಕಂಗಾಲಾದ ಪೋಷಕರು ಕೂಡಲೇ ಹೆಚ್ಎಎಲ್ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಮನೆ ಬಿಟ್ಟ 13 ವರ್ಷದ ಬಾಲಕಿಯ ಬುದ್ಧಿವಂತಿಕೆ ಪೊಲೀಸರನ್ನೇ ಬೆರಗುಗೊಳಿಸಿದೆ.
ಯಸ್, ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು 13 ವರ್ಷದ ಬಾಲಕಿಗೆ ತಿಳಿದಿದೆ. ತನ್ನ ಬಳಿಯಿದ್ದ ಆಧಾರ್ ಕಾರ್ಡ್ ಹಿಡಿದುಕೊಂಡು, ತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಕೆಎಸ್ಆರ್ಟಿಸಿ ಬಸ್ ಹತ್ತಿದ್ದಾಳೆ. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪುಟ್ಟ ಮಕ್ಕಳು ಯಾವುದೇ ಹಣವಿಲ್ಲದೆ, ಕೇವಲ ಆಧಾರ್ ಕಾರ್ಡ್ ಹಿಡಿದು ಬಸ್ ನಲ್ಲಿ ಸುತ್ತಿದ್ದಾರೆ.
ಇನ್ನೂ ಪೋಷಕರು ಕಂಪ್ಲೇಂಟ್ ನೀಡುತ್ತಿದ್ದಂತೆ ತಕ್ಷಣ ಅಲರ್ಟ್ ಆದ ಪೊಲೀಸರು ಈ ಬಗ್ಗೆ ರಾಜ್ಯಾದ್ಯಂತ ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಅಶ್ವತ್ಥನಗರ ಮನೆಯಿಂದ ಬ್ಯಾಗ್ ಹಿಡಿದು ಹೊರಟಿದ್ದ ಮಕ್ಕಳು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈ ವಾಕ್ ಹತ್ತಿ ಬಂದಿದ್ದಾರೆ. ಅಲ್ಲಿಂದ ಮೆಜೆಸ್ಟಿಕ್ಗೆ ಬಂದು ನೇರವಾಗಿ ಶಿವಮೊಗ್ಗಗೆ ತೆರಳಿದ್ದಾರೆ ಎಂಬುದು ಗೊತ್ತಾಗಿದೆ. ಹೀಗೆ ಬಸ್ ಹತ್ತಿಹೋದ ಇವರು ಭದ್ರವಾತಿಯಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಸಂದೇಶ ನೋಡಿ ಪೊಲೀಸರಿಗೆ ಕರೆ ಬಂದಿದೆ. ಫೋಟೊದಲ್ಲಿರುವ ಮಕ್ಕಳ ರೀತಿಯಲ್ಲೇ ಕಾಣುವ ಇಬ್ಬರು ಇಲ್ಲಿದ್ದಾರೆಂಬ ಮಾಹಿತಿ ಸಿಕ್ಕ ಕಾರಣ ವಿಷಯವನ್ನು HAL ಪೊಲೀಸರು ಸ್ಥಳೀಯ ಠಾಣೆಗೆ ತಿಳಿಸಿದ್ದಾರೆ. ಅವರು ಮಕ್ಕಳನ್ನು ರಕ್ಷಿಸಿದ್ದು, ಭದ್ರಾವತಿತಿಂದ ಹೆಚ್ಎಎಲ್ ಠಾಣೆಗೆ ಮನೆಬಿಟ್ಟು ತೆರಳಿದ್ದ ಅಕ್ಕ ಮತ್ತು ತಮ್ಮನನ್ನು ಕರೆತರಲಾಗಿದೆ.













